ಉದ್ಯಮಿ ರವಿ ಶೆಟ್ಟಿ ಮೂಡಂಬೈಲ್ ಅವರಿಗೆ ಸಮಾಜ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಉದ್ಯಮಿ ರವಿ ಶೆಟ್ಟಿ ಮೂಡಂಬೈಲ್ ಅವರಿಗೆ ಸಮಾಜ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ

Share This
ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಮಾಜ ಸೇವೆಗಾಗಿ ರವಿ ಶೆಟ್ಟಿ ಮೂಡಂಬೈಲ್ ಪ್ರಶಸ್ತಿ ಸ್ವೀಕರಿಸಿದರು.
ರವಿ ಶೆಟ್ಟಿ ಮೂಡಂಬೈಲ್ ಸಮಾಜ ಸೇವಕ, ಉದ್ಯಮಿಯಾಗಿದ್ದಾರೆ. ಅವರು ಸಮಾಜ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ-ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಯ ಪುತ್ರನಾಗಿ ಬಂಟ್ವಾಳ ತಾಲೂಕಿನ ಮೂಡಂಬೈಲುನಲ್ಲಿ 1963 ಜು.20 ರಂದು ಜನಿಸಿದ ರವಿ ಶೆಟ್ಟಿ ಅವರು ಎಂಜಿನಿಯರಿಂಗ್ ಹಾಗೂ ಎಂಬಿಎ ಪದವೀಧರರಾಗಿದ್ದಾರೆ. 

ಭಾರತದಲ್ಲಿ ಹಲವಾರು ಪ್ರಮುಖ ಕಂಪನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿರುವ ರವಿಶೆಟ್ಟಿಯವರು ಕೆಲವು ವರ್ಷಗಳಿಂದ ಕತಾರ್‌ನಲ್ಲಿ ಎಟಿಎಸ್ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಸಂಘ ಕತಾರ್, ತುಳುಕೂಟ ಕತಾರ್, ಬಂಟ್ಸ್ ಕತಾರ್ ಹಾಗೂ ಜಿಲ್ಲೆಯ ಹಲವು ಸಂಘಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಮಹಾಪೋಷಕರಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. 

ರವಿ ಶೆಟ್ಟಿಯವರ ಜೀವನದ ಬಗ್ಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರವಿತೇಜ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಕಟಿಸಿತ್ತು. 'ನನ್ನ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಇದು ಇನ್ನೂ ಹೆಚ್ಚಿನ ಸಮಾಜಸೇವೆಗೆ ಪ್ರೇರಣೆಯಾಗಿದೆ' ಎಂದು ರವಿ ಶೆಟ್ಟಿ ಮೂಡಂಬೈಲ್ ತಿಳಿಸಿದ್ದಾರೆ.

ಸಮಾಜಸೇವೆಯಲ್ಲೇ ಆತ್ಮತೃಪ್ತಿ ಪಡೆಯುವ ಕಲಾಪೋಷಕ ಉದ್ಯಮಿ ರವಿ ಶೆಟ್ಟಿ ಮೂಡಂಬೈಲ್: ಇನ್ನೊಬ್ಬರಿಗಾಗಿ ಬದುಕದ ಜೀವನವು ಜೀವನಲೇ ಅಲ್ಲ ಎಂಬ ಮದರ್ ತೆರೇಸಾ ಅವರ ಮಾತು ರವಿ ಶೆಟ್ಟಿ ಮೂಡಂಬೈಲ್ ಮೇಲೆ ಭಾರೀ ಪ್ರಭಾವ ಬೀರಿದೆ. ಆ ಮಾತಿನಿಂದ ಪ್ರೇರಿತರಾಗಿ ಅದರಂತೆ ಬದುಕುತ್ತಿರುವ ರವಿ ಶೆಟ್ಟಿ ಅವರು ಪರರ ಕಷ್ಟಕ್ಕೆ ಸ್ಪಂದಿಸುವುದರಲ್ಲೇ ಖುಷಿ ಪಡೆಯುವ ಅತಿ ಅಪರೂಪದ ಓರ್ವ ಸಮಾಜಸೇವೆಯ ತುಡಿತ ಹೊಂದಿರುವ ಉದ್ಯಮಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ.

ಇವರು ಎಂಜಿನಿಯರಿಂಗ್ ಪದವೀಧರರಾಗಿ ಭಾರತದಲ್ಲಿ ಹಲವಾರು ಪ್ರಮುಖ ಕಂಪೆನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿದ್ದು, ಪ್ರಸ್ತುತ ಕೆಲವು ವರ್ಷಗಳಿಂದ ಕೊಲ್ಲಿ ರಾಷ್ಟವಾಗಿರುವ ಕತಾರ್‌ನಲ್ಲಿ ಎಟಿಎಸ್ ಎಂಬ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಹಲವಾರು ಸಂಘಟನೆಗಳಲ್ಲೂ ಸಕ್ರಿಯರಾಗಿರುವವರು. ಕತಾರ್‌ನ ತುಳುಕೂಟ, ಬಂಟರ ಸಂಘ, ಕರ್ನಾಟಕ ಸಂಘಗಳಲ್ಲಿ ಇವರ ಕೊಡುಗೆ ಹಾಗೂ ಕ್ರಿಯಾಶೀಲತೆ ಅತಿ ಹೆಚ್ಚಿನದ್ದಾಗಿದೆ. ಇದರಲ್ಲಿ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತು ಸಂಘದೊದಿಗೆ ಅದರ ಸದಸ್ಯರನ್ನೂ ಬೆಳೆಸಿದವರು, ಬೆಳೆಸುತ್ತಿರುವವರು. ಊರಿನಿಂದ ಕತಾರ್‌ಗೆ ಹೋದವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನೂ ಮಾಡುವವರು. ಉದ್ಯೋಗ, ಆರ್ಥಿಕ ಸಹಾಯದಲ್ಲೂ ಇವರದು ಎತ್ತಿದ ಕೈ. ಇವರ ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು 400ರಷ್ಟು ಸಿಬಂದಿಯಿದ್ದರೂ, ಇದುವರೆಗೆ ಸುಮಾರು 2,000ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ ದೊಡ್ಡ ಸಂಸ್ಥೆಯಿದು. ಅದರಲ್ಲಿ ಬಹುತೇಕರು ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ ಹಾಗೂ ಇವರ ಹುಟ್ಟೂರಿನ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಸಾಧನೆಯ ತುಡಿತ: ಹೈದರಾಬಾದ್‌ನಲ್ಲಿ ಟಾಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾಗಲೇ ಇವರು ಎರಡು ಹೋಟೆಲ್‌ಗಳನ್ನು ಆರಂಭಿಸಿ ಉದ್ಯಮ ಕ್ಷೇತ್ರಕ್ಕೂ ಕಾಲಿರಿಸಿ ಭವಿಷ್ಯದ ಸಾಧಕರಾಗುವ ಲಕ್ಷಣ ತೋರಿದ್ದರು.

ಸಾತ್ವಿಕತೆಯೇ ಅಲಂಕಾರ: ನಾನು ಗಮನಿಸಿದಂತೆ ರವಿ ಶೆಟ್ಟಿಯವರಿಗೆ ಸಾತ್ವಿಕತೆಯೇ ದೊಡ್ಡ ಅಲಂಕಾರ. ಅವರು ಯಾರ ಮನಸ್ಸನ್ನೂ ನೋಯಿಸಿದವರಲ್ಲ, ಮನಸ್ಸಿಗೆ ಒಪ್ಪುವಂಥ ಹಿತವಾದ ಮೃದು ಮಾತುಗಳಿಂದ ಅವರು ಅಸಂಖ್ಯ ಮಂದಿಯ ಗೌರವ, ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ನೆರವು ಯಾಚಿಸಿದವರನ್ನು ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಯೇ ಇಲ್ಲ. ಎಷ್ಟು ಎತ್ತರಕ್ಕೆ ಏರಿದ್ದರೂ ಒಂದಿಷ್ಟೂ ಅಹಂ, ಬಿಗುಮಾನ ಅವರಲ್ಲಿಲ್ಲ. ಇಂಥವರು ಅತ್ಯಂತ ಅಪರೂಪವಾಗಿರುತ್ತಾರೆ. ಎಷ್ಟು ಸಣ್ಣ ಪ್ರಾಯದವರಲ್ಲೂ ಅವರು ಮಾತುನಾಡುವ ರೀತಿಯನ್ನು ಕಂಡರೆ ನಮಗೆ ಆಶ್ಚರ್ಯವಾಗದೆ ಇರದು. ಅವರ ಮಾತಿನಲ್ಲಿ ಪ್ರೀತಿ, ಗೌರವ ಪ್ರತಿಫಲಿಸುತ್ತಿರುತ್ತದೆ. ಆದ್ದರಿಂದಲೇ ಅವರ ವ್ಯಕ್ತಿತ್ವದ ಸೌಂದರ್ಯವೂ ಮಿರಿಮಿರಿ ಹೊಳೆಯುತ್ತಿರುತ್ತದೆ.

ಕಲಾಪೋಷಕ: ಇವರು ಎಂಜಿನಿಯರಿಂಗ್ ಓದಿ ಉದ್ಯಮಿಯಾಗಿದ್ದರೂ ಕಲೆಗೆ ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯವೇ. ಮೊದಲ ಬಾರಿಗೆ ಯಕ್ಷಗಾನ ತಂಡವನ್ನು ಕತಾರ್‌ಗೆ ಕರೆಸಿಕೊಂಡು ಕಾರ್ಯಕ್ರಮ ಕೊಡಿಸಿದ ಹೆಮ್ಮೆ ಇವರಿಗೆ ಸಲ್ಲಬೇಕು. ಇವರ ಎಟಿಎಸ್ ಕಂಪೆನಿಯ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಜತೆಗೆ ಊರಿನಿಂದ ಹೋಗುವ ನಾಟಕ ತಂಡಗಳಿಗೂ ಅವರು ನೀಡಿರುವ ಹಾಗೂ ನೀಡುತ್ತಿರುವ ಸಹಕಾರ ಮೆಚ್ಚತಕ್ಕದ್ದು. ಆದ್ದರಿಂದಲೇ ಕಲಾವಿದರಿಗೆ ಹಾಗೂ ಕಲಾತಂಡದ ಪಾಲಿಗೆ ಇವರೋರ್ವ ದೊಡ್ಡ ಆಲದಮರವಿದ್ದಂತೆ. ನಮ್ಮ ಚಾ ಪರ್ಕ ತಂಡವು ಕತಾರ್‌ಗೆ ಹೋಗಿದ್ದಾಗಲೆಲ್ಲ ರವಿ ಶೆಟ್ಟರು ನೀಡಿರುವ ಸಹಾಯ, ಸಹಕಾರಕ್ಕೆ ನಾವು ಸದಾ ಋಣಿಯಾಗಿದ್ದೇವೆ. ನಮಗೆ ಅದು ಪರವೂರು ಎಂಬ ಭಾವನೆ ಬಾರದಂತೆ ನಮ್ಮ ಮನೆಮಂದಿಯತೆಯೇ ಅವರು ನೋಡಿಕೊಳ್ಳುತ್ತಿದ್ದರು. ಇದು ಕೇವಲ ಚಾ ಪರ್ಕ ತಂಡದ ಅನುಭವ ಮಾತ್ರ ಎನ್ನುವಂತಿಲ್ಲ. ಕತಾರ್‌ಗೆ ಹೋಗಿರುವ ಬಹುತೇಕ ಎಲ್ಲ ಕಲಾತಂಡ ಮತ್ತು ಕಲಾವಿದರು ಕೂಡ ರವಿ ಶೆಟ್ಟಿ ಬಗ್ಗೆ ಇಂಥ ಮಾತನ್ನೇ ಹೇಳುವುದು ಖಚಿತ.

ಕೊಡುಗೈ ದಾನಿ: ರವಿ ಶೆಟ್ಟರು ನೀಡಿರುವ ದಾನಗಳು ಇಂತಿಷ್ಟೆ ಎಂದು ಲೆಕ್ಕಹಾಕಲಾಗದು. ದೇವಸ್ಥಾನವಿರಬಹುದು, ಶಿಕ್ಷಣ ಸಂಸ್ಥೆಯಿರಬಹುದು, ಸಾಮಾಜಿಕ ಸಂಸ್ಥೆಗಳಿಗಿರಬಹುದು, ಸರಕಾರದ ವಿವಿಧ ಪರಿಹಾರ ನಿಧಿಗಿರಬಹುದು, ವಿದ್ಯಾರ್ಥಿಗಳ ಶಿಕ್ಷಣಣಕ್ಕಿರಬಹುದು, ಆರೋಗ್ಯ ಸಂಬಂಧಿ ವಿಷಯಗಳಿಗಿರಬಹುದು ಹೀಗೆ ಎಷ್ಟೋ ಮಂದಿಗೆ ಅವರು ನೀಡಿರುವ ದಾನವೇ ಕೋಟ್ಯಂತರ ರೂ. ಆಗಬಹುದು. ಇವರಿಂದ ಸಹಾಯ ಕೇಳಬೇಕು ಎಂದೇನಿಲ್ಲ. ತುಂಬಾ ಸಂಕಷ್ಟ, ತೊಂದರೆಯಲ್ಲಿ ಯಾರೂ ಸಿಲುಕಿಕೊಂಡಿದ್ದಾರೆ ಎಂಬುದು ಗೊತ್ತಾದರೆ ಸ್ವಯಂಪ್ರೇರಿತರಾಗಿ ಸಹಾಯಹಸ್ತ ಚಾಚುವುದು ಇವರ ಹೆಚ್ಚುಗಾರಿಕೆ. ತಾನು ಮಾಡಿದ ಸಹಾಯವನ್ನು ನಾಲ್ಕು ಮಂದಿಯೊಂದಿಗೆ ಹಂಚಿಕೊಳ್ಳುವ ಸ್ವಭಾವವೂ ಇವರದ್ದಲ್ಲ. ದಾನ ನೀಡಿದ್ದನ್ನು ಹೇಳಿಕೊಂಡರೆ ಅದರಿಂದ ಸಿಗಬಹುದಾದ ತೃಪ್ತಿಯನ್ನು ಕಳೆದುಕೊಂಡಂತೆ ಎಂಬ ಭಾವನೆ ಇವರದ್ದು. ಆದ್ದರಿಂದ ಅವರು ನೀಡಿರುವ ದೇಣಿಗೆ, ಮಾಡಿರುವ ಸಹಾಯದ ಲೆಕ್ಕ ಪಕ್ಕಾ ಇಲ್ಲ. ಇದು ಅಶಕ್ತರಿಗೆ ನೀಡುವ ಸಹಾಯ, ದಾಖಲೆಗಾಗಿ ಮಾಡುವ ಕೆಲಸವಲ್ಲ ಎಂಬುದು ಅವರ ಅಭಿಪ್ರಾಯ.

ಸಮಾಜಸೇವೆಯಲ್ಲಿ ಖುಷಿ: ಸಮಾಜಸೇವೆಯಲ್ಲಿ ಅವರಿಗೆ ಏನೋ ಒಂದು ಖುಷಿ. ನಾಲ್ಕು ಮಂದಿಗೆ ಸಹಾಯ ಮಾಡುವುದರಿಂದ ಸಿಗುವ ಸಂತೃಪ್ತಿ ಬೇರೆ ಯಾವುದರಿಂದಲೂ ಸಿಗದು ಎಂದು ಹೇಳುವ ಅವರು, ತಾನು ಈ ಹಂತಕ್ಕೆ ಬರುವುದಕ್ಕೆ ಕಲಿಸಿದ ಶಿಕ್ಷಕರು, ಹೆತ್ತು ಸಾಕಿದವರು ಹಾಗೂ ಪ್ರೀತಿಯ ಗೆಳೆಯರೇ ಕಾರಣ ಎನ್ನುತ್ತಿರುವುದು ಅವರಲ್ಲಿ ತಾನು ಎಂಬ ಅಹಂ ಇಲ್ಲ ಎಂಬುದನ್ನು ಸಾಬೀತು ಮಾಡುತ್ತದೆ. ಇವರ ಎಲ್ಲ ರೀತಿಯ ಸಮಾಜಸೇವೆಗೆ ಪತ್ನಿ, ಮಕ್ಕಳ ಸಂಪೂರ್ಣ ಸಹಕರಾವೂ ಇದೆ. ಅಂಥದ್ದೊಂದು ಕುಟುಂಬವನ್ನು ಪಡೆದಿರುವ ತಾನು ಧನ್ಯ ಎಂಬ ತೃಪ್ತಿಯೂ ಅವರಲ್ಲಿ ಎದ್ದು ಕಾಣುತ್ತಿದೆ.

ಏನು ಹೇಳಿದರೂ ಕಡಿಮೆಯೇ: ಇವರನ್ನು ಪರೋಪಕಾರಿ, ಸಮಾಜಸೇವಕ, ಆಪದ್ಬಾಂಧವ, ಆಶ್ರಯದಾತ, ಕೊಡುಗೈದಾನಿ ಹೀಗೆ ಯಾವ ವಿಶೇಷಣಗಳಿಂದ ಕರೆದರೂ ಕಡಿಮೆಯೇ. ಇವರು ಈ ಎಲ್ಲ ವಿಶೇಷಣಗಳಿಗೂ ಮೀರಿ ನಿಲ್ಲುವವರು ನಮ್ಮ ರವಿಯಣ್ಣ. ಅವರ ಪ್ರೀತಿ, ಆತಿಥ್ಯವನ್ನು ಶಬ್ದದಲ್ಲಿ ಹಿಡಿದಿಡುವುದು ಒಂದು ಸಾಹಸವೇ. ಅದು ನಮ್ಮಂಥವರಿಗೆ ಸಾಧ್ಯವಾದುದಲ್ಲ. ಅದನ್ನು ಅನುಭವಿಸಿಯೇ ತೀರಬೇಕು.
 
ತುಳುನಾಡಿನ ಹೆಮ್ಮೆ: ಇಂಥ ಸಾಧಕ ಹಾಗೂ ಶ್ರೇಷ್ಠ ವ್ಯಕ್ತಿ ನಮ್ಮವರು ಎಂದು ಹೇಳಲು ನಾವು ಹೆಮ್ಮೆಪಡಬೇಕಾಗಿದೆ. ತುಳುನಾಡಿನ ಮಣ್ಣಲ್ಲಿ ಹುಟ್ಟಿ ಅರಬರ ನಾಡಿನಲ್ಲಿ ಈಗ ಔದ್ಯೋಗಿಕ ನೆಲೆ ಕಂಡುಕೊಂಡಿದ್ದರೂ ಅವರ ತುಡಿತ ತುಳುನಾಡು ಹಾಗೂ ತುಳುವರ ಕಡೆಗಿದೆ. ಇಂಥ ಮಾಣಿಕ್ಯವೊಂದು ತುಳುನಾಡಿಗೆ ದೊಡ್ಡ ಶೋಭೆ. ತುಳುನಾಡಿನವರ ಔದಾರ್ಯಕ್ಕೆ ಇವರೊಬ್ಬ ಉತ್ತಮ ಉದಾಹರಣೆಯಾಗಿದ್ದಾರೆ. ದೂರದ ಊರಿನಲ್ಲಿದ್ದರೂ ಕಷ್ಟದ ಸಂದರ್ಭದಲ್ಲಿ ಇವರು ಥಟ್ಟನೆ ನೆನಪಾಗಿ, ನಮ್ಮ ಪಕ್ಕದಲ್ಲೇ ಇದ್ದಂತೆ ಭಾಸವಾಗುತ್ತದೆ. ತುಳುಮಾತೆಯ ಅಪರೂಪದ ಪುತ್ರಮಾಣಿಕ್ಯವಾಗಿರುವ ರವಿ ಶೆಟ್ರು ಎಲ್ಲಿ ಹೋದರೂ ಅಲ್ಲಿ ತನ್ನ ಸೇವೆಯ ಮೂಲಕವೇ ಮಿಂಚುವ ಧ್ರುವನಕ್ಷತ್ರವಾಗಿದ್ದಾರೆ.

ಜನರ ಪ್ರೀತಿಗಿಂತ ದೊಡ್ಡ ಪ್ರಶಸ್ತಿಯಿಲ್ಲ: ರವಿ ಶೆಟ್ಟಿಯವರಿಗೆ ಸಮಾಜಸೇವೆ, ಉದ್ಯಮಕ್ಕೆ ಸಂಬಂಧಿಸಿ ಅಸಂಖ್ಯ ಪ್ರಶಸ್ತಿ, ಸಮ್ಮಾನಗಳು ಸಂದಿವೆ. ಅದು ಅವರಲ್ಲಿ ಯಾರ ಬದಲಾವಣೆಯನ್ನೂ ಮಾಡಿಲ್ಲ. ಆದರೆ ಅದರಿಂದ ತನ್ನ ಜವಾಬ್ದಾರಿ ಹೆಚ್ಚಿದೆ ಎನ್ನುತ್ತಾರೆ ರವಿ ಶೆಟ್ಟಿ ಮೂಡಂಬೈಲ್. (ಜಗನ್ನಾಥ ಶೆಟ್ಟಿ ಬಾಳ)

Pages