ದೇವರ ಮೇಲಿನ ಶ್ರದ್ಧಾಭಕ್ತಿಯಿಂದ ಯಾವುದೇ ವ್ಯವಹಾರ ಮಾಡಿದಲ್ಲಿ ಭಗವಂತ ಕೈ ಬಿಡುವುದಿಲ್ಲ : ಡಾ. ವೀರೇಂದ್ರ ಹೆಗ್ಗಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದೇವರ ಮೇಲಿನ ಶ್ರದ್ಧಾಭಕ್ತಿಯಿಂದ ಯಾವುದೇ ವ್ಯವಹಾರ ಮಾಡಿದಲ್ಲಿ ಭಗವಂತ ಕೈ ಬಿಡುವುದಿಲ್ಲ : ಡಾ. ವೀರೇಂದ್ರ ಹೆಗ್ಗಡೆ

Share This

ಮಹೇಶ್ ಮೋಟಾರ್ಸ್ ಸಂಸ್ಥೆಯ 50ರ ಸಂಭ್ರಮ

ಮಂಗಳೂರು : ದೇವರ ಮೇಲಿನ ಶ್ರದ್ಧಾಭಕ್ತಿಗಳಿಂದ ಯಾವುದೇ ವ್ಯವಹಾರ ಮಾಡಿದಲ್ಲಿ ಭಗವಂತ ಕೈ ಬಿಡುವುದಿಲ್ಲ. ಜನರ ದೈನಂದಿನ ಸಂಚಾರಕ್ಕಾಗಿ ಬಸ್ಸು ಉದ್ಯಮವನ್ನು ನಡೆಸುವವರು ವಿಶ್ವಾಸಾರ್ಹತೆಯನ್ನು ಗಳಿಸಬೇಕು. ನಂಬಿಕೆಗೆ ಮೊದಲ ಹೆಸರು ಬಸ್ಸು. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ ಖಾಸಗಿ ಮಾಲಕತ್ವದ ಬಸ್ಸುಗಳು ನೂರಾರು ಮಂದಿಗೆ ಉದ್ಯೋಗ, ಅವರ ಕುಟುಂಬ ಪೋಷಣೆ ಮತ್ತು ಜನತೆಗೆ ಸಂಚಾರ ಸೌಲಭ್ಯಗಳನ್ನು ಒದಗಿಸಿವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.
ಮಹೇಶ್ ಮೋಟಾರ್ಸ್ ಸಂಸ್ಥೆಯು ಧರ್ಮಸ್ಥಳ ಕ್ಷೇತ್ರದ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾರಿಗೆ ಉದ್ಯಮ ಪ್ರಾರಂಭಿಸಿ ಯಶಸ್ವಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬೀಡಿಗೆ ಆಗಮಿಸಿ ತಮಗೆ ನೀಡಿದ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು. ಮಹೇಶ್ ಮೋಟಾರ್ಸ್ ಸಂಸ್ಥೆಯು ಎ.ಕೆ.ಜಯರಾಮ ಶೇಖರ ನೇತೃತ್ವದಲ್ಲಿ ಯಶಸ್ವಿಯಾಗಿ ವ್ಯವಹಾರ ನಡೆಸಿ ಜನಪ್ರಿಯವಾಗುವುದಕ್ಕೆ ಅವರ ಪ್ರಾಮಾಣಿಕತೆ ಮತ್ತು ಪರಿಶ್ರಮ ಕಾರಣ ಎಂದವರು ನುಡಿದರು.

ಬಸ್ಸು ಮಾದರಿಯ ಕಲಾಕೃತಿ: ಮಹೇಶ್ ಮೋಟಾರ್ಸ್ ಮಾಲಕರಾದ ಎ.ಕೆ. ಜಯರಾಮ ಶೇಖ ಮತ್ತು ಪದ್ಮಾವತಿ ಶೇಖ ದಂಪತಿಗಳು ಬಸ್ಸಿನ ಮಾದರಿಯ ಬೆಳ್ಳಿಯ ಕಲಾಕೃತಿಯೊಂದನ್ನು ಹೆಗ್ಗಡೆ ಅವರಿಗೆ ಕಾಣಿಕೆಯಾಗಿ ನೀಡಿದರು. ಐವತ್ತು ವರ್ಷಗಳ ಹಿಂದೆ ಧರ್ಮಸ್ಥಳ ಮೇಳದ ಬಸ್ಸೊಂದನ್ನು ಖರೀದಿಸಿ ಸಾರಿಗೆ ಉದ್ಯಮಕ್ಕೆ ತೊಡಗಿದ ಸಂಸ್ಥೆ ಇದು ರಾಜ್ಯದ ವಿವಿಧೆಡೆ 35 ಬಸ್ಸುಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ದೇವರ ಅನುಗ್ರಹ ಮತ್ತು ಹೆಗ್ಗಡೆಯವರ ಆಶೀರ್ವಾದ ಕಾರಣ ಎಂದು ಜಯರಾಮ ಶೇಖ ನುಡಿದರು.

ಚಾಲಕ ಮಂಜುನಾಥರಿಗೆ ಸನ್ಮಾನ: ಮಹೇಶ್ ಮೋಟಾರ್ಸ್ ನಲ್ಲಿ ಆರಂಭದ ಚಾಲಕನಾಗಿ 27 ವರ್ಷ ದುಡಿದ ಮಂಜುನಾಥ ಸನಿಲ್ ಎಂ. ಅವರನ್ನು ಈ ಸಂದರ್ಭದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್ ಶುಭಾಶಂಸನೆಗೈದು ಮಾತನಾಡಿ, ಮಹೇಶ್ ಮೋಟಾರ್ಸ್ ತನ್ನ 50 ವರ್ಷದ ಸಂಭ್ರಮದೊಂದಿಗೆ ಅಪಘಾತವಿಲ್ಲದೆ ದೀರ್ಘಕಾಲ ಬಸ್ಸು ನಡೆಸಿ ಸಾರ್ಥಕ ಸೇವೆಗೈದ ಚಾಲಕರನ್ನು ಗುರುತಿಸಿ ಕ್ಷೇತ್ರದಲ್ಲಿ ಸನ್ಮಾನಿಸಿರುವುದು ಒಂದು ಉತ್ತಮ ಮಾದರಿ ಎಂದರು.

ಸಂಸ್ಥೆಯ ಪಾಲುದಾರರಾದ ಸಂಜ್ಯೋತಿ ಶೇಖ, ಮಹೇಶ್ ಶೇಖ, ಪ್ರಕಾಶ್ ಶೇಖ, ಕಿಶನ್ ಶೆಟ್ಟಿ ಅಡ್ಯಾರ್ ಗಾರ್ಡನ್, ಪ್ರಶಾಂತ್ ಶೆಟ್ಟಿ ರಿಯಾಧ್ ಹಾಗೂ ಕುಟುಂಬದ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಲಹೆಗಾರ ಪ್ರೊ‌. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ವಂದಿಸಿದರು. ಬಳಿಕ ಶ್ರೀಮಂಜುನಾಥ ಸ್ವಾಮಿಗೆ ಪಲ್ಲಕ್ಕಿ ಬಲಿ ಮತ್ತು ಬೆಳ್ಳಿ ರಥೋತ್ಸವದ ಸೇವೆಯನ್ನು ನೆರವೇರಿಸಲಾಯಿತು.

Pages