ಮಂಗಳೂರು : ತೆಂಕುತಿಟ್ಟಿನ ಯಕ್ಷಗಾನ ರಂಗದ ಹಿರಿಯ ಪುಂಡುವೇಷಧಾರಿ ಮಾಡಾವು ಕೊರಗಪ್ಪ ರೈ, ನಗ್ರಿ ಮಹಾಬಲ ರೈ ಹಾಗೂ ಪ್ರಸಿದ್ಧ ವೇಷಧಾರಿ, ಅರ್ಥದಾರಿ ಶ್ರೀ ಕನ್ನಡಿಕಟ್ಟೆ ಗಣೇಶ ಶೆಟ್ಟಿ ಅವರಿಗೆ ಪ್ರಥಮ ವರ್ಷದ 'ಭಂಡಸಾಲೆ ರತ್ನ ಪ್ರಶಸ್ತಿ - 2022' ನೀಡಿ ಗೌರವಿಸಲಾಗುವುದು ಎಂದು ಸಂಘಟಕ ಮಹೇಶ್ ಶೆಟ್ಟಿ ಭಂಡಾರಪಾದೆ ಪಲ್ಲಿಮಜಲುಗುತ್ತು ಅವರು ತಿಳಿಸಿದ್ದಾರೆ.
![](https://blogger.googleusercontent.com/img/b/R29vZ2xl/AVvXsEi_iKeymCOWUrBh-1EjEaUc8LBO33ucjxuyZNAU1qDXSXrVa_4HyclKAUNE8b6brWbBv8ngidDi6YKOZg2_Vk8tsJ6O0SoL-IYPNN-rtCgwcKQ87oRP9QpmtZqLPHsg18vjJiONGKV3EaaNiliSJ3rDvXoaRLgQRHNmrNSJ69kN-MbP-hmKKbG2Hk03Gw/s16000/IMG_20220331_141436_copy_640x436.jpg)
![](https://blogger.googleusercontent.com/img/b/R29vZ2xl/AVvXsEg1nPH9ScdrCty2VauZxKvFBCpgN4uWlGmBD6xn3qh3R_PtV9f0e_dx0m9N_vyOs8v4Svzg9uRM6-vD028dIfGy5WYCMd81S1-ojSm_YW4wyJT_gNa98KB-QRVxocJs8AbCer_nJS-yfVFbhcXAxSvzyenJjxQpe62aklaPXIRgiQEC6mXldxOiE5detA/s16000/WhatsApp%20Image%202022-03-30%20at%2011.04.03%20AM_copy_480x742.jpeg)
ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿರುವ ಹರೇಕಳ, ಪಾವೂರು, ಆಂಬ್ಲಮೊಗರು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಪ್ರತಿಷ್ಠೆ, ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಹಾಗೂ ಉತ್ಸವಗಳ ಸರಣಿ ಕಾರ್ಯಕ್ರಮದಲ್ಲಿ, ಎ.1 ಶುಕ್ರವಾರ ಹರೇಕಳ ಗ್ರಾಮದ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಕಟೀಲು ಮೇಳದ ಸೇವೆಯಾಟದ ಸಂದರ್ಭದಲ್ಲಿ 'ಭಂಡಸಾಲೆ ರತ್ನ ಪ್ರಶಸ್ತಿ -2022' ಗೌರವನಿಧಿ, ಸ್ಮರಣಿಕೆಯೊಂದಿಗೆ ವಿತರಿಸಲಾಗುವುದು.
![](https://blogger.googleusercontent.com/img/b/R29vZ2xl/AVvXsEgCVllp3RfoROThaj-XHKLiovblEaK6uzhk__BBKuuAKCcDTJm8qLCBAmEpcZpgQgxYeWzXwgN1l7kq1kFODKJjRALjMP8kHqNenUdB6S6KDx5NAkNSPvEBpYxpt_AxN3dNdqFlIUNQUAdLFd9giHmZABGBBbxF-TefqTUAppjmqcrH1rrkc2MqA-e_Bw/s16000/IMG_20220331_141318.jpg)
ಪ್ರಶಸ್ತಿಗೆ ಆಯ್ಕೆಯಾಗಿರುವ ಮಾಡಾವು ಕೊರಗಪ್ಪ ರೈ ಅವರು ಕರ್ನಾಟಕ, ಬಪ್ಪನಾಡು, ಬೆಳ್ಮಣ್ ಕಾಂತಾವರ ಮೇಳಗಳಲ್ಲಿ ತಿರುಗಾಟ ನಡೆಸಿ ಕಳೆದ 30 ವರ್ಷಗಳಿಂದ ಶ್ರೀ ಕಟೀಲು ಮೇಳದಲ್ಲಿ ಕಲಾವ್ಯವಸಾಯ ಮಾಡುತ್ತಿದ್ದಾರೆ. ಚಂಡ-ಮುಂಡ, ಅಭಿಮನ್ಯು, ಬಬ್ರುವಾಹನ, ಭಾರ್ಗವ ಮೊದಲಾದ ಪುಂಡುವೇಷಗಳಲ್ಲಿ ತನ್ನದೇ ಶೈಲಿಯಲ್ಲಿ ಹಿತಮಿತ ನೃತ್ಯ, ಮಾತುಗಾರಿಕೆಯಿಂದ ಯಕ್ಷಗಾನ ರಂಗದಲ್ಲಿ ನಾಲ್ಕೂವರೆ ದಶಕ ಕಲಾ ಸೇವೆಗೈಯುತ್ತಿದ್ದಾರೆ.
![](https://blogger.googleusercontent.com/img/b/R29vZ2xl/AVvXsEjC9Ka4ZK2BNWJHOXDHe9TxvCFE3u8hzlXT5mAlLYI_8CVuA0u5aJS-W2xADm3My1TBTq8ekJ-zgj1iFH_okBvzVzeeFOjfeFMwksYG9KxpurDGVnawh1Mts9WIinZHNwNLhZyYWBZIS7zxXgaNSBxIr15ZEr_vXOCD65zqn2U7RkABUVz8FhQG2ON3zA/s16000/IMG_20220331_141149.jpg)
ನಗ್ರಿ ಮಹಾಬಲ ರೈ ಕಳೆದ 48 ವರ್ಷಗಳಿಂದ ವೇಷಧಾರಿಯಾಗಿ ಕಲಾ ಸೇವೆಗೈಯ್ಯುತ್ತಿರುವ ಶ್ರೀಯುತರು 32 ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಮಾಡಿರುತ್ತಾರೆ ಇವರು ಮಹಿಷಾಸುರ, ವೇಷದಲ್ಲಿ ಖ್ಯಾತಿ ಪಡೆದಿರುತ್ತಾರೆ.
![](https://blogger.googleusercontent.com/img/b/R29vZ2xl/AVvXsEhG6TzcMkAeXc65lK0JYkU_m8UTdWLiQK9p5lgDf3oD2_pI2Xe0UeT2UaGI1ur3z9MginrTD_LaS7GnjqnhYrvgavApDQ4etAZAzWVLcyL4VGP1r8NoFYbdnPN7MbD3j8wTK-Gh8PHw3qKJJpnpCgNmG_d-EWppKlxzKiETegX7Cp7K0lKgimbs8o11cg/s16000/IMG_20220331_141220_copy_512x482.jpg)
ಕನ್ನಡಿಕಟ್ಟೆ ಗಣೇಶ ಶೆಟ್ಟಿಯವರು ಕಳೆದ ಹದಿನಾರು ವರ್ಷಗಳಿಂದ ಶ್ರೀ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದ ಪೀಠಿಕೆ ವೇಷ, ಎದುರು ವೇಷಗಳಲ್ಲಿ ರಾಜಕಿರೀಟ, ನಾಟಕೀಯ ವೇಷಗಳಲ್ಲಿ ಸಿದ್ಧಿ ಪ್ರಸಿದ್ದಿ ಪಡೆದಿದ್ದಾರೆ. ರಕ್ತಬೀಜ, ಅತಿಕಾಯ, ಅರುಣಾಸುರ, ಶನೀಶ್ವರ, ಪರೀಕ್ಷಿತ, ಕರ್ಣ, ದೇವೇಂದ್ರ ಮೊದಲಾದ ಪಾತ್ರ ನಿರ್ವಹಣೆಯಲ್ಲಿ, ಸಂಭಾಷಣಾ ವೈವಿಧ್ಯತೆಯ ಮೂಲಕ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿರುವ ಅಧ್ಯಯನ ಶೀಲ ವೇಷಧಾರಿ ಹಾಗೂ ತಾಳಮದ್ದಳೆ, ಅರ್ಥದಾರಿಯಾಗಿದ್ದಾರೆ.
ಶ್ರೀಮತಿ ಕೇಸರಿ ಎಸ್. ಶೆಟ್ಟಿ ದೋಣಿಂಜೆಗುತ್ತು ಮತ್ತು ಬಿ ಸಂಕಪ್ಪ ಶೆಟ್ಟಿ ಭಂಡಾರಪಾದೆ ಮತ್ತು ಮಕ್ಕಳು ಪ್ರತೀ ವರ್ಷ ಶ್ರೀ ಕಟೀಲು ಮೇಳದ ಸೇವೆ ಬಯಲಾಟದಂದು ಪ್ರಶಸ್ತಿಯನ್ನು ಯಕ್ಷಗಾನ ಸಾಧಕರಿಗೆ ನೀಡಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಮಾರ್ಗದರ್ಶಕರಾದ ನವನೀತ್ ಶೆಟ್ಟಿ ಕದ್ರಿ, ಸಂಘಟಕರಾದ ಭಂಡಾರಪಾದೆ ಮಹೇಶ್ ಶೆಟ್ಟಿ, ಭಂಡಾರಪಾದೆ ಮಧುಸೂದನ್ ಶೆಟ್ಟಿ ಮತ್ತು ಪ್ರದೀಪ್ ಆಳ್ವರ ಉಪಸ್ಥಿತರಿದ್ದರು.