ಬಂಟ್ಸ್ ನ್ಯೂಸ್, ಬಂಟ್ವಾಳ : ಪ್ರಸಿದ್ದ ಯಕ್ಷಗಾನ ಕಲಾವಿದ ಸೊರ್ನಾಡು ವಿಶ್ವನಾಥ ಶೆಟ್ಟಿ (81), ಪ್ರಸ್ತುತ ವಿಶ್ವನಾಥ ಸ್ವಾಮಿಯವರು ಇಂದು (ಆಗಸ್ಟ್ 1, 2021) ಬೆಳಗ್ಗೆ ಸೊರ್ನಾಡುವಿನ ತಮ್ಮ ಸ್ವ ಆಶ್ರಮದಲ್ಲಿ ದೈವಾಧೀನರಾದರು.
ಎಳವೆಯಲ್ಲೇ ಯಕ್ಷಗಾನಾಸಕ್ತಿ
ಹೊಂದಿದ್ದ ವಿಶ್ವನಾಥ ಶೆಟ್ಟರು ಎಂಕು ಭಾಗವತರಿಂದ ಚೆಂಡೆ-ಮದ್ದಳೆ, ಮೂಡಬಿದ್ರೆ ವಾಸು ಅವರಿಂದ ಯಕ್ಷಗಾನದ
ಕುಣಿತ, ಕೂರ್ಯಾಳ ತಮ್ಮಯ್ಯ ಆಚಾರ್ಯ ಮತ್ತು ನಾಂಞ ಕಿಲ್ಲೆಯವರಿಂದ ಅರ್ಥಗಾರಿಕೆ ಹಾಗೂ ರಾಜನ್ ಅಯ್ಯರ್
ರಿಂದ ತಾಂಡವ ನೃತ್ಯವನ್ನು ಅಭ್ಯಸಿಸಿದ್ದರು. ಸೊರ್ನಾಡು ಶ್ರೀ ದುರ್ಗಾಪರಮೇಶ್ವರಿ ಮೇಳವನ್ನು ಕಟ್ಟಿ
ಯಕ್ಷಗಾನ ಬಯಲಾಟಗಳನ್ನು ನಡೆಸಿಕೊಂಡು ಬಂದಿದ್ದರು.
ಉತ್ತಮ ಪುಂಡು ವೇಷಧಾರಿಯಾಗಿ
ಹೆಸರು ಪಡೆದ ಅವರು ಮುಂದೆ ಹನೂಮಂತ, ಹರಿಶ್ಚಂದ್ರ, ಭಸ್ಮಾಸುರ, ಹಿರಣ್ಯಕಶ್ಯಪ, ಕೋಟಿ ಮುಂತಾದ ಪಾತ್ರಗಳಲ್ಲಿ
ಖ್ಯಾತಿ ಪಡೆದಿದ್ದರು. ಈ ನಡುವೆ ಅವರು ಅಧ್ಯಾತ್ಮದ ಹಾದಿ ತುಳಿದು ಬಂಟ್ವಾಳ ತಾಲೂಕಿನ ಸುವರ್ಣನಾಡು
ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸ್ಥಾಪಕರಾಗಿ ವಿಶ್ವನಾಥ ಸ್ವಾಮಿಯೆನಿಸಿಕೊಂಡರು.