ಜು.30, 2021 ರಂದು ಪೂರ್ವಾಹ್ನ :9.30ಕ್ಕೆ ಸಮುದಾಯ ಆರೋಗ್ಯ ಕೇಂದ್ರ, ಹೆಬ್ರಿ, ಇಲ್ಲಿ ಕರೋನಾ 2ನೇ ಲಸಿಕೆ ಹಾಕಿಸಿ ಹೆಬ್ರಿಯಿಂದ ಬ್ರಹ್ಮಾವರಕ್ಕೆ ಲಕ್ಷ್ಮೀ ಎಕ್ಸ್ ಪ್ರೆಸ್ ಬಸ್ ಮೂಲಕ ಹೊರಟೆವು. ಆ ಬಸ್ ಕೊಕ್ಕರ್ಣೆ -ಮಂದಾರ್ತಿ -ಬಾರಕೂರು ಮೂಲಕ ಬ್ರಹ್ಮಾವರಕ್ಕೆ ಬರುವ ಬಸ್. ಕರೋನಾ ಒಂದನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಅದೆಷ್ಟು ಜನರು ಕರೋನ ಬಂದು ಗುಣಮುಖರಾದರು.


ಅನೇಕರು ತಮ್ಮ ಅಮೂಲ್ಯ
ಜೀವ ಕಳೆದುಕೊಂಡರು. ಎರಡು ಹಂತದಲ್ಲಿ ಲಾಕ್ ಡೌನ್ ಜಾರಿಗೆ ತಂದ ಸರ್ಕಾರ ಜನರ ಚಲನವಲನ ನಿರ್ಬಂಧಿಸಿ
ಕರೋನ ಹರಡುವಿಕೆ ನಿಯಂತ್ರಿಸುವ ಕೆಲಸ ಸರ್ಕಾರ ಮಾಡಿತು.ಆದರೆ ಕರೋನ ನಿಯಂತ್ರಿಸುವ ಪ್ರಮುಖ ಕೆಲಸ ಮಾಡಿ
ಚಿಕಿತ್ಸೆ ನೀಡಿ, ಪ್ರಾಣ ಉಳಿಸಿದ್ದು ವೈದ್ಯರು ಹಾಗೂ ಸಿಬ್ಬಂದಿಗಳು. ಕರೋನಾ ವಾರಿಯರ್ ಆಗಿ ಅನೇಕರು
ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರಿಗೆ ಸಲ್ಯೂಟ್.
ಇಂದು ನಾನು ಉಮೇಶ್
ಕಾಡೂರು ಬಗ್ಗೆ ಹೇಳಲೇಬೇಕು. ಲಾಕ್ ಡೌನ್ ನಂತರ ನಿಧಾನವಾಗಿ ವಾಹನ ಸಂಚಾರ ಆರಂಭವಾಗಿದೆ. ಜನರ ಓಡಾಟ
ಹೆಚ್ಚಾಗಿದೆ. ಆದರೆ ವಯಕ್ತಿಕ ಜವಾಬ್ದಾರಿ ನಮ್ಮಲ್ಲಿ ಅನೇಕರು ಪಾಲಿಸುತ್ತಿಲ್ಲ. ಬಸ್ನಲ್ಲಿ ಸಂಚಾರ
ಮಾಡುವ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವುದು ಆಗದು ಬಿಡಿ. ಕನಿಷ್ಠ ಮಾಸ್ಕ್
ಹಾಕಿಕೊಳ್ಳದವರನ್ನು ನೋಡುತ್ತಿದ್ದೇವೆ. ಎಲ್ಲಾ ತಪ್ಪನ್ನು ಸರ್ಕಾರ ದ ಮೇಲೆ ಹಾಕುತ್ತೇವೆ. ಮಾಸ್ಕ್
ಬಳಕೆ, ಸಾಮಾಜಿಕ ಅಂತರ ನೋಡಿಕೊಳ್ಳುವುದು, ಸ್ಯಾನಿಟೈಸ್ ಬಳಕೆ ಸಾಧ್ಯವಾಗದೆ ನಮಗೆ.
ಹೆಬ್ರಿಯಲ್ಲಿ ಬಸ್
ಹತ್ತಿ ಕುಳಿತುಕೊಂಡ ನಮಗೆ ಕಂಡಕ್ಟರ್ ಕಾರ್ಯ ವೈಖರಿ ನೋಡಿ ಅಭಿಮಾನ ಮೂಡಿತು. ಅನೇಕ ಪ್ರಯಾಣಿಕರು ಮಾಸ್ಕ್
ಧರಿಸದೆ ಕುಳಿತುಕೊಂಡಿದ್ದರು. ಇನ್ನೂ ಕೆಲವರು ಮಾಸ್ಕ್ ಇದ್ದರೂ ಕಿಸೆಯಲ್ಲಿ, ಚೀಲದಲ್ಲಿ ಇಟ್ಟುಕೊಂಡು
ಕುಳಿತಿದ್ದರು. ಪ್ರತಿ ಪ್ರಯಾಣಿಕರಿಗೂ ಮಾಸ್ಕ್ ಧರಿಸುವ ಅನಿವಾರ್ಯತೆ ಬಗ್ಗೆ ತಿಳಿಸಿ ಮಾಸ್ಕ್ ಧರಿಸುವಂತೆ
ಮಾಡುತ್ತಿದ್ದರು. ಕೆಲವರು ಉಡಾಫೆ ಮಾತು ಆಡುತ್ತಿದ್ದರು. ಇನ್ನೂ ಕೆಲವರು ಮಾಸ್ಕ್ ಧರಿಸಲು ಹಣ ಕೊಡುತ್ತೀರಾ,
ಮಾಸ್ಕ್ ಧರಿಸದೆ ನಾನು ಸತ್ತರೆ ನಿಮಗೇನು ಎಂಬ ಮಾತು ಆಡುವವರು ಇದ್ದರು. ಕಂಡಕ್ಟರ್ ರನ್ನು ಕರೆದು
ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಾಸ್ಕ್ ಹಾಕುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ
ಎಂದು ಹತ್ತಿರ ಕುಳಿತವರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದೆ. ನಿಮ್ಮಂತ ಕೆಲವು ಪ್ರಯಾಣಿಕರು
ಇದ್ದರೆ ನಮಗೆ ಸಹಾಯವಾಗುತ್ತದೆ ಎಂದರು.
ಮೊನ್ನೆ ಪೊಲೀಸ್
ರೈಡ್ ನಲ್ಲಿ ಕೆಲವರು ಮಾಸ್ಕ್ ಹಾಕದೆ ದಂಡ ಹಾಕಿಸಿಕೊಂಡರು. ಅವರ ತಪ್ಪಿಗೆ ನಾನು ದಂಡ ಕೊಡಬೇಕಾಯಿತು
ಎಂದು ನೊಂದುಕೊಂಡರು. ಹೆಬ್ರಿಯಿಂದ ಬ್ರಹ್ಮಾವರ ತಲುಪುವವರೆಗೂ ಮಾಸ್ಕ್ ಹಾಕಿ ಎಂದು ಎಚ್ಚರಿಸುತ್ತಲೇ
ಇದ್ದ ಉಮೇಶ್ ಕಾಡೂರು ಇವರಿಗೆ ನನ್ನ ಸಲಾಂ. ಇಂತಹ ಪ್ರಯತ್ನ ಎಲ್ಲಾ ಬಸ್ ಕಂಡಕ್ಟರ್ ಮಾಡಬೇಕು. ಕರೋನಾ
ಜಾಗೃತಿ ಮೂಡಿಸಬೇಕು. ನಾನು ಪ್ರಯಾಣಿಸಿದ ಯಾವ ಬಸ್ ನಲ್ಲಿ ಇಲ್ಲದ ಕರೋನಾ ಜಾಗೃತಿ, ಕಳಕಳಿ ಕಂಡು ಮನಸಾರೆ
ಅಭಿನಂದಿಸಿ, ಹಾರೈಸಿ, ಮೆಚ್ಚುಗೆಯ ಮಾತುಗಳಾಡಿ ಬ್ರಹ್ಮಾವರದಲ್ಲಿ ಇಳಿದೆವು.
ಬರಹ:
ಅಶೋಕ್ ಕುಮಾರ್ ಶೆಟ್ಟಿ