ಡಿ.25ರಂದು ಬಂಗ್ರಕೂಳೂರಿನಲ್ಲಿ “ಪ್ರಕಾಶಾಭಿನಂದನ 60ರ ಸಂಭ್ರಮ” - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಡಿ.25ರಂದು ಬಂಗ್ರಕೂಳೂರಿನಲ್ಲಿ “ಪ್ರಕಾಶಾಭಿನಂದನ 60ರ ಸಂಭ್ರಮ”

Share This
BUNTS NEWS, ಮಂಗಳೂರು: ಎಂಆರ್ಜಿ ಗ್ರೂಪ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ ಅವರಿಗೆ 60 ವರ್ಷ ತುಂಬಿದ  ಹಿನ್ನಲೆಯಲ್ಲಿ ಡಿ.25ರಂದು ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿಪ್ರಕಾಶಾಭಿನಂದನ  60 ಸಂಭ್ರಮ” ಕಾರ್ಯಕ್ರಮ ಜರಗಲಿದ್ದು, ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಗೋಲ್ಡ್ ಪಿಂಚ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ  ಐಕಳ ಹರೀಶ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಸಮಾಜದ ಮೇಲೆ ಇರುವ ಪ್ರೀತಿಯಂತೆ ಇತರ ಸಮಾಜದವರ ಬಗ್ಗೆಯೂ ಪ್ರೀತಿ ಕಾಳಜಿ ಇದೆ. ಎಲ್ಲಾ ಸಮಾಜದವರನ್ನು ಸೇರಿಸಿ ಕಾರ್ಯಕ್ರಮದ ಆಯೋಜನೆಯಾಗಲಿ. ಒಂದು ಪ್ರಕಾಶಾಭಿನಂದನಾ ಸಮ್ಮೇಳನ ಇತಿಹಾಸದ  ಪುಟ ಸೇರಲಿ ಎಂದರು. ಮುಂಬಯಿಯಲ್ಲಿರುವ ಬಂಟರ ಸಂಘಗಳಿಗೆ ಕೆ. ಪ್ರಕಾಶ್ ಶೆಟ್ಟಿ ಅವರು ಆರ್ಥಿಕ ನೆರವು ನೀಡಿದ್ದಾರೆ. ಹೀಗಾಗಿ  ಮುಂಬಾಯಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿ ಕೈ ಜೋಡಿಸುವ ಕೆಲಸ ಮಾಡಲಿದ್ದಾರೆ ಎಂದರು.

ಸಭೆಯಲ್ಲಿದ್ದ ಇಂಟರ್ನ್ಯಾಷನಲ್  ಬಂಟ್ಸ್ ವೆಲ್ಫೇರ್ ಟ್ರಸ್ಟ್  ಅಧ್ಯಕ್ಷ  . ಸದಾನಂದ ಶೆಟ್ಟಿ ಮಾತನಾಡಿ  ಕೆ. ಪ್ರಕಾಶ್ ಶೆಟ್ಟಿ ಸ್ಟೈಲ್ಕಿಂಗ್,  ಅವರು ಬಂಟರ ಸಮಾಜಕ್ಕೊಂದು ಶಕ್ತಿ, ಜೀವನದಲ್ಲಿ ಕಷ್ಟ  ಸುಖಗಳನ್ನು ಅನುಭವಿಸಿ ಸ್ವಾಭಿಮಾನದಲ್ಲಿ  ಬದುಕು ಕಟ್ಟಿಕೊಂಡವರು ಎಂದು ತಿಳಿಸಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ  ಮಾತನಾಡಿ,  ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಸಮಾಜ  ಒಟ್ಟಾಗಬೇಕು. ಪ್ರಕಾಶಾಭಿನಂದನೆ ಕಾರ್ಯಕ್ರಮದಲ್ಲಿ ಸೇರುವ ಜನರಿಗೆ ಅತಿಥಿ ಸತ್ಕಾರ  ನೀಡಿ ಗೌರವ ನೀಡುವುದರತ್ತ ಹೆಚ್ಚು ಗಮನ ಹರಿಸಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಪ್ರಕಾಶಾಭಿನಂದನೆ ಸಮಿತಿಯ ಮಂಗಳೂರು ವಿಭಾಗದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಮಾತನಾಡಿ, ಪ್ರಕಾಶ್  ಅವರಲ್ಲಿ ಒಳ್ಳೆಯ  ಗುಣ, ಮಾನವೀಯತೆಯನ್ನು  ಕಾಣಬಹುದಾಗಿದೆ. ಅವರು ಎತ್ತರಕ್ಕೆ ಬೆಳೆದಂತೆ ಅವರಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಅವರು ತಿಳಿಸಿದರು.

ಉಡುಪಿ  ವಿಭಾಗದ ಅಧ್ಯಕ್ಷ ಮನೋಹರ ಶೆಟ್ಟಿ ಸಾಯಿರಾಧ ಮಾತನಾಡಿ, ಪ್ರಕಾಶ್  ಅವರಲ್ಲಿರುವ ಆದರ್ಶಗಳು, ತತ್ವ ವಿಚಾರಧಾರೆಗಳು  ಸಮಾಜಕ್ಕೆ ಪ್ರಯೋಜನವಾಗಬೇಕು. ದಾನ ಧರ್ಮದಲ್ಲಿ ಪ್ರಕಾಶ್ ಶೆಟ್ಟಿ ಇಂದು ಮುಂಚೂಣಿಯಲ್ಲಿದ್ದಾರೆ. ಅವರು ಸಮಾಜದ  ಚಿಂತಕ,  ಬಡವರು. ಮಕ್ಕಳ ಬಗ್ಗೆ ಅವರಿಗಿರುವ ಕಾಳಜಿಯ ಜತೆಗೆ ಸಮಾಜಕ್ಕೆ ಯಾವಾಗಲೂ ಒಳ್ಳೆಯದಾಗಲಿ  ಎಂಬುದನ್ನು ಸದಾ ಬಯಸುವ  ಪ್ರಕಾಶ್ ಅವರ ಪ್ರಕಾಶಾಭಿನಂದನೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಪ್ರಕಾಶ್ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಒಂದು ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಚಲನ ಚಿತ್ರ ಕಲಾವಿದರು ಸಹಿತ ವಿವಿಧ ಕ್ಷೇತ್ರಗಳಿರುವ ಗಣ್ಯರು  ಭಾಗವಹಿಸುತ್ತಿದ್ದಾರೆ. ಪ್ರತಿಯೊಂದು ಬಂಟರ ಸಂಘಗಳು ಜವಾಬ್ದಾರಿ ಹೊತ್ತು ಕೆಲಸ ಮಾಡುವ ಅಗತ್ಯ ಇದೆ ಎಂದರು.

ಕಾರ್ಯಕ್ರಮಕ್ಕೆ ಬಂದವರನ್ನು ಸ್ವಾಗತಿಸಿ ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ಪುಣೆ ಬಂಟರ ಸಂಘದ ಅಧ್ಯಕ್ಷ  ಸಂತೋಷ್ ಕುಮಾರ್ ಶೆಟ್ಟಿ ,ಇದೊಂದು  ಆಡಂಬರದ ಸಂಭ್ರಮ ಅಲ್ಲ, ಪ್ರಕಾಶ್ ಶೆಟ್ಟಿ ಅವರಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಬೆಳಕಿಗೆ ತರಬೇಕು ಎನ್ನುವ ಉದ್ದೇಶವೂ ಇದೆ. ಪ್ರಕಾಶ್ ಶೆಟ್ಟಿ ಸಮಾಜದಲ್ಲಿರುವ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದು ಓರ್ವನ ಸಮಾಜಮುಖೀ ಚಿಂತನೆಗೆ ನೀಡುವ ಗೌರವ ಅಭಿನಂದನೆ ಎಂದು ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕಾಶಾಭಿನಂದನೆ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪ್ರಕಾಶಾಭಿನಂದನೆಯಿಂದ ಒಂದಷ್ಟು ಜನರಿಗೆ ಪ್ರಯೋಜನ ಆಗಬೇಕು. ಎಲ್ಲಾ ಸಮಾಜ ವರ್ಗದವರನ್ನು ಸೇರಿಸಿ ಅರ್ಥಪೂರ್ಣ ಹಾಗೂ ಆದರ್ಶ ಕಾರ್ಯಕ್ರಮ ನಡೆಸಬೇಕು ಎನ್ನುವ ಉದ್ದೇಶ ಹೊಂದಿದ್ದೇವೆ. ಕಾರ್ಯಕ್ರಮದ ಸ್ವರೂಪಕ್ಕೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ಮೂಲಕ ಇಡೀ ಸಮಾಜ ಒಟ್ಟಾಗಬೇಕು. ಒಗ್ಗಟ್ಟಾಗಿ ಇರಬೇಕು ಎನ್ನುವುದು ಸಮಿತಿಯ ಆಶಯವಾಗಿದೆ. ಪ್ರಕಾಶ್ ಶೆಟ್ಟಿ ಬಂಟ ಸಮಾಜದವರಿಗೆ ರೋಲ್ ಮಾಡೆಲ್. ಬಂಟರು ಬೇರೊಬ್ಬರನ್ನು ನಾಯಕನೆಂದು ಒಪ್ಪಲಾರರು. ಅವರೇ ನಾಯಕ. ಹೀಗಾಗಿ ಎಲ್ಲರಿಗೂ ಜವಾಬ್ದಾರಿ ಇದೆ. ಕಾರ್ಯಕ್ರಮದಲ್ಲಿ ಸುಮಾರು 20ರಿಂದ 25 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಪ್ರತಿ ವಿಭಾಗದಲ್ಲಿ  ಎಲ್ಲರಿಗೂ ಹೆಚ್ಚಿನ ಜವಾಬ್ದಾರಿ ಇದೆ. ಕಾರ್ಯಕ್ರಮದಲ್ಲಿ ಯಕ್ಷಗಾನ ಸಹಿತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿದ್ದ ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಸಮಾಜದ ಎಲ್ಲಾ ವರ್ಗದವರ ಕಷ್ಟ, ಸುಖಗಳಿಗೆ ಸ್ಪಂದಿಸುವ ಪ್ರಕಾಶ್ ಶೆಟ್ಟಿ ಗೌರವ ನೀಡುವ ಕಾರ್ಯಕ್ರಮಕ್ಕೆ ಸಹಕಾರಿ ಕ್ಷೇತ್ರಗಳಿಂದ ಸಹಕಾರ ನೀಡಲಾಗುವುದು. ಸಮಾಜಕ್ಕೆ ಬೆಳಕು ನೀಡುವ ಪ್ರಕಾಶ್ ಶೆಟ್ಟಿ ಅವರಲ್ಲಿ ನಾಯಕತ್ವದ ಗುಣಗಳಿದ್ದು, ಅದರ ಪ್ರಯೋಜನ ಸಮಾಜಕ್ಕೆ ದೊರೆಯಲಿ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಪ್ರಕಾಶ್ ಶೆಟ್ಟಿ ಸಮಾಜಕ್ಕೆ ಒಂದು  ದೊಡ್ಡ ಶಕ್ತಿ ಎಂದರು. ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ ಮಾತನಾಡಿ, ಪ್ರಕಾಶಾಭಿನಂದನ ಕಾರ್ಯಕ್ರಮದ ಉದ್ದೇಶ , ಆಶಯ ಜನರಿಗೆ ತಲುಪುವಂತಾಗಲಿ. ಇದರಿಂದ ಸಮಾಜವು ಪ್ರಯೋಜನ ಪಡೆದು ಸಮಾಜಕ್ಕೆ ಅವರೊಬ್ಬ ಸಮರ್ಥ ನಾಯಕರಾಗಿ ಮೂಡಿ ಬರಲಿ ಎಂದರು.

ಇತರ ಸಮಾಜದವರನ್ನು ಸೇರಿಸಿ ನಡೆಸುವ ಪ್ರಕಾಶಾಭಿನಂದನೆ ಕಾರ್ಯಕ್ರಮ ದಾಖಲೀಕರಣ ಸಮ್ಮೇಳನ ಆಗಲಿ ಎಂದು ಕದ್ರಿ ನವನೀತ ಶೆಟ್ಟಿ ತಿಳಿಸಿದರು. ಸಭೆಯಲ್ಲಿ ಪಡುಬಿದ್ರೆ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಮಾಜಿ ಅಧ್ಯಕ್ಷ  ಚಂದ್ರಶೇಖರ ರೈ, ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ, ಕುಂದಾಪುರ ಯುವ ಬಂಟರ ಸಂಘದ ಅಧ್ಯಕ್ಷ ರೋಹಿತ್ ಹೆಗ್ಡೆ, ಪುರುಷೋತ್ತಮ ಭಂಡಾರಿ ಅಡ್ಯಾರ್, ಅಶೋಕ್ ಶೆಟ್ಟಿ ನಂದಿಕೂರು, ಎಕ್ಕಾರ್ ಬಂಟರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ಶ್ರೀನಾಥ ಹೆಗ್ಡೆ, ರತ್ನಾಕರ ಶೆಟ್ಟಿ ಮುಂಬೈ, ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾಪು ಲೀಲಾಧರ್ ಶೆಟ್ಟಿ, ಗಣೇಶ್ ಶೆಟ್ಟಿ,  ಉದಯ ಶೆಟ್ಟಿ ಮೊದಲಾದವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಮಿತಿಯ ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಡುಬಿದ್ರೆ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶಭಿನಂದನಾ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವು ಇದೆ. ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ತಂಡದಿಂದ ಯಕ್ಷಗಾನ ವೈಭವ ನಡೆಯಲಿದೆ. ಜತೆಗೆ ಕನ್ನಡದ ಖ್ಯಾತ ಕಲಾವಿದರು ಸಮಾರಂಭದಲ್ಲಿ ಭಾಗವಹಿಸಲಿದ್ದು, ಸ್ಯಾಂಡಲ್ವುಡ್ ಸಂಗೀತ ದಿಗ್ಗಜರಿಂದ ರಸಮಂಜರಿ ತಾರಾಮೆರುಗು ನಡೆಯಲಿದೆ.

Pages