BUNTS NEWS, ಮಂಗಳೂರು: ಅಳಿಕೆ ರಾಮಯ್ಯ ರೈ
ಸ್ಮಾರಕ ಟ್ರಸ್ಟ್ ಬೆಂಗಳೂರು ಹಾಗೂ
ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ
ವೇದಿಕೆ ಆಶ್ರಯದಲ್ಲಿ ಎ.13ರಂದು ಮಂಗಳಾದೇವಿ
ದೇವಸ್ಥಾನದ ಕಲಾಮಂಟಪದಲ್ಲಿ ನಡೆಯುವ 'ದಿ.ಅಳಿಕೆ
ರಾಮಯ್ಯ ರೈ ಸಂಸ್ಮರಣೆ ಮತ್ತು
ಪ್ರಶಸ್ತಿ ಪ್ರದಾನ' ಸಮಾರಂಭ ನಡೆಯಲಿದೆ.
ಯಕ್ಷಗಾನರಂಗದ
ಮೇರು ಕಲಾವಿದ ದಿ. ಅಳಿಕೆ
ರಾಮಯ್ಯ ರೈಯವರ ಸ್ಮರಣಾರ್ಥ 2009ರಲ್ಲಿ
ಸ್ಥಾಪನೆಗೊಂಡ ‘ಅಳಿಕೆ ಸ್ಮಾರಕ ಟ್ರಸ್ಟ್’
ಪ್ರತಿವರ್ಷ ಅರ್ಹ ಕಲಾವಿದರನ್ನು ಆಯ್ದು
ಸಹಾಯನಿಧಿ ವಿತರಿಸುತ್ತಿದೆ. ಅಲ್ಲದೆ ‘ಅಳಿಕೆ ಪ್ರಶಸ್ತಿ’ಯನ್ನು ಈವರೆಗೆ ಕಲಾವಿದರ
ಮನೆಯಂಗಳದಲ್ಲೇ ವಿತರಿಸಲಾಗುತ್ತಿತ್ತು. ಈ ಕಾರ್ಯಕ್ರಮಕ್ಕೀಗ ಹತ್ತು
ವರ್ಷ ತುಂಬಿದೆ. ಪ್ರಸ್ತುತ 2018-19ನೇ ಸಾಲಿಗೆ ಈ
ಪ್ರಶಸ್ತಿಗೆ ಭಾಜನರಾದವರು ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಮಾಡಾವು
ಕೊರಗಪ್ಪ ರೈ ಮತ್ತು ಮುಂಡಾಜೆ
ಬಾಲಕೃಷ್ಣ ಶೆಟ್ಟಿ. ಈರ್ವರೂ ಅಳಿಕೆ
ರಾಮಯ್ಯ ರೈ ಯವರಿದ್ದ ಕರ್ನಾಟಕ
ಮೇಳದಲ್ಲಿ ಬಾಲಕಲಾವಿದರಾಗಿ ಸೇರ್ಪಡೆಗೊಂಡು ಮುಂದೆ ಪುಂಡು ವೇಷಧಾರಿಗಳಾಗಿ
ಪ್ರಸಿದ್ಧರಾದವರು.
ಮಾಡಾವು ಕೊರಗಪ್ಪ ರೈ:
ಪುತ್ತೂರು ತಾಲೂಕಿನ ಕೈಯೂರು ಗ್ರಾಮದಲ್ಲಿ
ಮಾಡಾವು ಮಾಹಾಬಲರೈ ಮತ್ತು ಕಮಲ ಎಂ.
ರೈ ದಂಪತಿಗೆ ಡಿ.26, 1955ರಲ್ಲಿ
ಜನಿಸಿದ ಕೊರಗಪ್ಪ ರೈ ಮಧ್ಯಮ
ವರ್ಗದ ಕೃಷಿಕ ಕುಟುಂಬದಿಂದ ಬಂದವರು.
ಏಳನೇ ತರಗತಿಗೆ ಅವರ ವಿದ್ಯಾಭ್ಯಾಸ
ನಿಂತಿತು. ಆ ಮೇಲೆ ಧರ್ಮಸ್ಥಳ
ಲಲಿತಕಲಾ ಕೇಂದ್ರದಲ್ಲಿ ದಿ. ಪಡ್ರೆ ಚಂದು
ಅವರಿಂದ ಯಕ್ಷಗಾನದ ನಾಟ್ಯಾಭ್ಯಾಸ ಮಾಡಿ ಕರ್ನಾಟಕ ಮೇಳದ
ಮೂಲಕ ವೃತ್ತಿರಂಗಭೂಮಿಗೆ ಪದಾರ್ಪಣೆ ಮಾಡಿದರು. ಕಲ್ಲಾಡಿ ವಿಠಲ ಶೆಟ್ಟರ
ಯಾಜಮಾನ್ಯದಲ್ಲಿ ಐದು ವರ್ಷ ಸೇವೆ
ಸಲ್ಲಿಸಿ ಬಳಿಕ ಬಪ್ಪನಾಡು, ಕದ್ರಿ,
ಕಾಂತಾವರ ಮೇಳಗಳಲ್ಲಿ ಒಟ್ಟು ಒಂಭತ್ತು ವರ್ಷ
ತಿರುಗಾಟ ನಡೆಸಿದರು. ಆ ಮೇಲೆ ದಿ.
ಕುಬಣೂರು ಶ್ರೀಧರ ರಾಯರು ಅವರನ್ನು
ಕಟೀಲು ಮೇಳಕ್ಕೆ ತರೆತಂದರು. ಕಳೆದ
ಇಪ್ಪತ್ತೈದು ವರ್ಷಗಳಿಂದ ಅದೇ ಮೇಳದಲ್ಲಿ ಅವರು
ವ್ಯವಸಾಯ ಮಾಡುತ್ತಿದ್ದಾರೆ.
ಮುಂಡಾಜೆ ಬಾಲಕೃಷ್ಣ
ಶೆಟ್ಟಿ:
ಮುಂಡಾಜೆ ರಾಮಯ್ಯ ಶೆಟ್ಟಿ ಮತ್ತು
ತುಂಗಮ್ಮ ದಂಪತಿಗೆ ನ.2, 1956ರಲ್ಲಿ
ಜನಿಸಿದ ಬಾಲಕೃಷ್ಣ ಶೆಟ್ಟಿ ಕಲಿತದ್ದು ಮೂರನೇ
ತರಗತಿ. ಧರ್ಮಸ್ಥಳ ಯಕ್ಷಗಾನ ಕೇಂದ್ರದ ಆರಂಭದ
ವರ್ಷವೇ ಕುರಿಯ ವಿಠಲ ಶಾಸ್ತ್ರಿ
ಮತ್ತು ಪಡ್ರೆ ಚಂದು ಅವರಿಂದ
ಯಕ್ಷಗಾನ ಕುಣಿತವನ್ನು ಅಭ್ಯಸಿಸಿ ಯಕ್ಷರಂಗಕ್ಕೆ ಕಾಲಿಟ್ಟರು. ಚಿಕ್ಕಪ್ಪ ಪ್ರಸಿದ್ಧ ಸ್ತ್ರೀವೇಷಧಾರಿ ಮಂಕುಡೆ ಸಂಜೀವ ಶೆಟ್ಟರ
ಮೂಲಕ ಕಲ್ಲಾಡಿ ವಿಠಲ ಶೆಟ್ಟರು
ನಡೆಸುತ್ತಿದ್ದ ಕರ್ನಾಟಕ ಯಕ್ಷಗಾನ ನಾಟಕ
ಸಭಾದಲ್ಲಿ ಗೆಜ್ಜೆಕಟ್ಟಿದ ಬಾಲಕೃಷ್ಣ ಶೆಟ್ಟಿ ಸಣ್ಣ ಪುಟ್ಟ
ಪಾತ್ರಗಳನ್ನು ಮಾಡುತ್ತಾ ಯಶಸ್ಸಿನ ಮೆಟ್ಟಿಲೇರಿದರು.
ಕರ್ನಾಟಕ
ಮೇಳವೊಂದರಲ್ಲೇ ಎರಡೂವರೆ ದಶಕಗಳ ತಿರುಗಾಟ
ಮಾಡಿರುವ ಮುಂಡಾಜೆ ಬಾಲಕೃಷ್ಣ ಶೆಟ್ಟರು
ಯಕ್ಷಗಾನದಲ್ಲಿ ಉತ್ತಮ ಅವಕಾಶವಿದ್ದಾಲೇ ಕಾಲುನೋವಿನ
ಕಾರಣದಿಂದ ಮೇಳ ತ್ಯಜಿಸುವಂತಾದುದು ದುರದೃಷ್ಟಕರ.
ಆದರೂ ಹವ್ಯಾಸಿ ತಂಡಗಳೊಂದಿಗೆ ಅವರ
ವೇಷಗಾರಿಕೆ ಮುಂದುವರಿದಿದೆ. ಯಕ್ಷಗಾನ ವೇಷ-ಭೂಷಣಗಳನ್ನು
ಒದಗಿಸಿ ಪ್ರಸಾಧನ ಕಲಾವಿದರಾಗಿಯೂ ಅವರು
ದುಡಿದಿದ್ದಾರೆ.
ಪ್ರಶಸ್ತಿ ಪ್ರದಾನ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಅಧ್ಯಕ್ಷ ಎ.ಸಿ. ಭಂಡಾರಿ
ಪ್ರಶಸ್ತಿ ಪ್ರದಾನ ಮಾಡುವರು. ಮಂಗಳಾದೇವಿ
ದೇವಸ್ಥಾನದ ಆಡಳ್ತೆ ಮೊಕ್ತೇಸರ ಪಿ.
ರಮಾನಾಥ ಹೆಗ್ಡೆ ಅಧ್ಯಕ್ಷತೆ ವಹಿಸುವರು.
ದ.ಕ. ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಪ್ರದೀಪ್ ಕುಮಾರ್ ಕಲ್ಕೂರ ಮತ್ತು
ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.
ಜಯರಾಮ ಶೇಖ ಮುಖ್ಯ ಅತಿಥಿಗಳಾಗಿರುವರು.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ
ಜೋಶಿ ಸಂಸ್ಮರಣಾ ಭಾಷಣ ಮಾಡುವರು. ಯಕ್ಷಾಂಗಣ
ಮಂಗಳೂರು ಇದರ ಕಾರ್ಯಾಧ್ಯಕ್ಷ ಭಾಸ್ಕರ
ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡುವರು. ಕಾರ್ಯಕ್ರಮದ
ಅಂಗವಾಗಿ ಅಪರಾಹ್ನ 2.30ರಿಂದ ಜಿಲ್ಲೆಯ ಪ್ರಸಿದ್ಧ
ಕಲಾವಿದರಿಂದ `ವಾಲಿಮೋಕ್ಷ’ ಯಕ್ಷಗಾನ ತಾಳಮದ್ದಳೆಯೂ ಜರಗಲಿದೆ.
ಸುದ್ದಿಗೋಷ್ಠಿಯಲ್ಲಿ
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ
ಭಾಸ್ಕರ ರೈ ಕುಕ್ಕುವಳ್ಳಿ, ಅಳಿಕೆ ಸ್ಮಾರಕ ಟ್ರಸ್ಟ್ ಸಂಚಾಲಕ ದುರ್ಗಾಪ್ರಸಾದ ರೈ, ಉಬರಡ್ಕ ಉಮೇಶ ಶೆಟ್ಟಿ,
ಸುಂದರ ಶೆಟ್ಟಿ ಬೆಟ್ಟಂಪಾಡಿ, ಅಶೋಕ್
ಮಾಡ, ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.