ಸ್ವಂತ ಮನೆಯಿಲ್ಲದೆ ಕವತ್ತಾರು ಕ್ಷೇತ್ರದಲ್ಲಿ ಆಶ್ರಯ ಪಡೆದಿರುವ ‘ಬಂಟ ಕುಟುಂಬ’ : ಸಹಾಯಕ್ಕೆ ಮನವಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸ್ವಂತ ಮನೆಯಿಲ್ಲದೆ ಕವತ್ತಾರು ಕ್ಷೇತ್ರದಲ್ಲಿ ಆಶ್ರಯ ಪಡೆದಿರುವ ‘ಬಂಟ ಕುಟುಂಬ’ : ಸಹಾಯಕ್ಕೆ ಮನವಿ

Share This
BUNTS NEWS, ಮಂಗಳೂರು: ತನ್ನದೇ ಆದ ಸ್ವಂತ ಮನೆಯಿಲ್ಲದೆ ಕವತ್ತಾರು ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಅಜಿಲರ ಮನೆಯಲ್ಲಿ ಭೋಜ ಕೊರಗ ಶೆಟ್ಟಿ – ವಸಂತಿ ಶೆಟ್ಟಿ ದಂಪತಿಗಳು ಆಶ್ರಯ ಪಡೆದಿದ್ದಾರೆ.
ಮೂಲತಃ ಕಾರ್ಕಳ ತಾಲೂಕಿನ ಕುಕ್ಕುಜೆ ದೊಂಡೇರಂಗಡಿ ಊರಿನವರಾದ ಭೋಜ ಶೆಟ್ಟಿ ಅವರು ಕೂಡು ಕುಟುಂಬದಲ್ಲಿ ವಾಸವಾಗಿದ್ದು ಇವರ ಬಡತನ, ಅನಕ್ಷರಸ್ಥತೆ ಹಾಗೂ ಕಾಲಿನ ಶಸ್ತ್ರಚಿಕಿತ್ಸೆಯಿಂದ ದುಡಿಯಲಾಗದ ಪರಿಸ್ಥಿತಿಯ ಕಂಡು ಮನೆಯಿಂದ ಹೊರ ಹಾಕಿದ್ದಾರೆ ಎಂದು ಹೇಳುತ್ತಾರೆ.

ನಂತರ 2 ವರ್ಷಗಳ ಕಾಲ ಅಜೆಕಾರು ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಬಾಡಿಗೆ ಕಟ್ಟಲಾಗದೆ ಬೀದಿಗೆ ಬಿದ್ದು ಕಡೆಗೆ ಕವತ್ತಾರು ಕ್ಷೇತ್ರದ ಅಜಿಲರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕ್ಷೇತ್ರದ ಸಣ್ಣಪುಟ್ಟ ಕೆಲಸವನ್ನು ಮಾಡುತ್ತ ದಿನದೂಡುತ್ತಿದ್ದಾರೆ. 63 ವರ್ಷದ ಭೋಜ ಕೊರಗ ಶೆಟ್ಟಿ ಅವರು ಹೊಟೇಲಿನಲ್ಲಿ ವೈಟರ್ ವೃತ್ತಿ ಮಾಡಿಕೊಂಡು ಸಂಸಾರವನ್ನು ನಡೆಸುತ್ತಿದ್ದರು. ಆದರೆ ಅವರ ಕಾಲಿಗೆ 2 ಭಾರಿ ನಡೆದಿರುವ ಶಸ್ತ್ರಚಿಕಿತ್ಸೆಯಿಂದಾಗಿ ಕಾಲು ಊದಿಕೊಂಡಿದ್ದು ನಿಂತು ಕೆಲಸ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ.

ತಮ್ಮ ಕಷ್ಟದ ಜೀವನದ ಬಗ್ಗೆ ಬಂಟ್ಸ್ ನ್ಯೂಸ್ ಜತೆ ಮಾತನಾಡಿದ ಭೋಜ ಶೆಟ್ಟಿ ಅವರು, ನಾವು ಅಣ್ಣತಮ್ಮಂದಿರು ಜತೆಯಾಗಿ ಹಣ ಹಾಕಿ ಜಾಗ ಖರೀದಿಸಿ ಒಂದೇ ಮನೆಯಲ್ಲಿ ವಾಸವಾಗಿದ್ದೆವು. ಕಾಲಿನ ಶಸ್ತ್ರಚಿಕಿತ್ಸೆ ನಂತರ ನನ್ನ ದುಡಿಯಲಾಗದ ಅಸಹಾಯಕ ಪರಿಸ್ಥಿತಿಯನ್ನು ಕಂಡು ಮನೆಯಿಂದ ಹೊರ ಹಾಕಿದ್ದಾರೆ. ಇದೀಗ ನನ್ನ ಕುಟುಂಬ ಬೀದಿ ಪಾಲಾಗಿದ್ದು ಸಾಧ್ಯವಾದಷ್ಠು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇವು. ದುಡಿಯಲಾಗದ ಪರಿಸ್ಥಿತಿಯಿಂದ ಬಾಡಿಗೆ ಮನೆಯಿಂದಲೂ ಹೊರಬಿದ್ದು ಕವತ್ತಾರು ಕ್ಷೇತ್ರದ ಅಜಿಲರ ಮನೆಯಲ್ಲಿ ಸದ್ಯಕ್ಕೆ ಆಶ್ರಯ ಪಡೆದಿರುವುದಾಗಿ ದುಃಖ ವ್ಯಕ್ತಪಡಿಸಿದ್ದಾರೆ.

ತಮಗೆ 2 ಮಕ್ಕಳಿದ್ದು ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಾಳೆ. 25 ವರ್ಷದ ಮಗ ಮಂಗಳೂರಿನ ಹೋಟೇಲ್’ನಲ್ಲಿ ದುಡಿಯುತ್ತಿದ್ದು ಅವನಿಗೂ ನಾವು ಬೇಡವಾಗಿದ್ದು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿಲ್ಲ. ಸುಮಾರು 50 ಸಾವಿರವರೆಗೆ ಸಾಲವಿದ್ದು ಅದನ್ನು ತೀರಿಸಬೇಕಾಗಿದೆ. ನಮ್ಮದೇ ಆದ ಮನೆಯಿದ್ದರೆ ಹೇಗೊ ಜೀವನ ಸಾಗಿಸಿ ದುಡಿದು ಸಾಲ ತೀರಿಸುತ್ತಿದ್ದೇವು. ಇದೀಗ ಎನೂ ಇಲ್ಲದ ಪರಿಸ್ಥಿತಿಯಲ್ಲಿದ್ದು ಆತ್ಮೀಯ ಸಹೃದಯಗಳು ನೆರವಿಗೆ ಬಂದು ಸಹಾಯಹಸ್ತ ನೀಡಬೇಕೆಂದು ಭೋಜ ಶೆಟ್ಟಿ ಅವರ ಪತ್ನಿ ವಸಂತಿ ಮನವಿ ಮಾಡಿಕೊಂಡಿದ್ದಾರೆ.

ಆತ್ಮೀಯ ಬಂಟ ಬಾಂಧವರು, ಬಂಟ ಸಂಘಗಳು ಭೋಜ ಶೆಟ್ಟಿ ಅವರ ಕಷ್ಟಕ್ಕೆ ನೆರವಾಗಿ ಸಹಾಯಹಸ್ತ ನೀಡಬಹುದು. ಮುಖ್ಯವಾಗಿ ಭೋಜ ಶೆಟ್ಟಿ–ವಸಂತಿ ಶೆಟ್ಟಿ ದಂಪತಿಗೆ ಸೂರಿನ ಅವಶ್ಯಕತೆಯಿದೆ. ಬಂಟ ಸಂಘಗಳು ಅಶಕ್ತ ಬಂಟರಿಗೆ ನೀಡುವ ಮನೆ ಸಹಾಯಕ್ಕೆ ಭೋಜ ಶೆಟ್ಟಿ ಅವರ ಕುಟುಂಬ ಸೂಕ್ತವಾಗಿದ್ದು ಅವರ ಬಗ್ಗೆ ಪರಿಶೀಲಿಸಿ ಆಶ್ರಯ ನೀಡಬೇಕಾಗಿ ಈ ಮೂಲಕ ಬಂಟ್ಸ್ ನ್ಯೂಸ್ ಮನವಿ ಮಾಡಿಕೊಳ್ಳುತ್ತಿದೆ.

ಸಾಮಾಜಿಕ ಕಳಕಳಿಯಿಂದ ಬಂಟ್ಸ್ ನ್ಯೂಸ್ ಈ ಸುದ್ದಿ ಪ್ರಕಟಿಸಿದ್ದು ಭೋಜ ಶೆಟ್ಟಿ ಅವರ ಹೆಚ್ಚಿನ ಮಾಹಿತಿಗೆ ಕವತ್ತಾರು ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವನ್ನು ಭೇಟಿ ಮಾಡಿ ಪಡೆಯಬಹುದು. ಅಥವಾ 9901650509 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

[ಸೂಚನೆ: ಭೋಜ ಶೆಟ್ಟಿ ಅವರಿಗೆ ಸಹಾಯಹಸ್ತ ನೀಡಿದ ದಾನಿಗಳು ತಮ್ಮ ಹೆಸರು, ತಾವು ಸಹಾಯಹಸ್ತ ನೀಡಿದ ವಿವರವನ್ನು ಬಂಟ್ಸ್ ನ್ಯೂಸಿನ ವಾಟ್ಸಾಪ್ ನಂಬರ್ 9743112517, 9743166567 ಗೆ ಕಳುಹಿಸಿ ಸಹಕರಿಸಿ]

Pages