ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಶ್ರೀ ಕಟೀಲು ಮೇಳದಲ್ಲಿ
ನಿರಂತರ 25 ವರ್ಷಗಳಿಂದ ಯಕ್ಷಗಾನ ಪುಂಡು ವೇಷಧಾರಿ
ಶ್ರೀ ಮಾಡಾವು ಕೊರಗಪ್ಪ ರೈ
ಅವರಿಗೆ ಕದ್ರಿ ವಿಷ್ಣು ಪ್ರಶಸ್ತಿ
- 2017* ಪ್ರದಾನ ಕಾರ್ಯಕ್ರಮ ನವೆಂಬರ್ 14ರಂದು ಶ್ರೀ ಕ್ಷೇತ್ರ
ಕದ್ರಿಯಲ್ಲಿ ಜರಗಲಿದೆ. ಯಕ್ಷ ಬಳಗ ಕದ್ರಿ
ಇವರ ಶ್ರೀ ಕಟೀಲು ಮೇಳದ
ಸೇವೆ ಆಟದ ಸಂದರ್ಭದಲ್ಲಿ ಪ್ರಶಸ್ತಿ
ಪ್ರದಾನ ಮಾಡಲಾಗುವುದು.
ಯಕ್ಷಗಾನದ
ರಾಜವೇಷಕ್ಕೆ ತನ್ನದೇ ಆದ ಅಪೂರ್ವ
ಕೊಡುಗೆ ನೀಡಿ, ತೆಂಕುತಿಟ್ಟಿನ ಪ್ರಾತಿನಿಧಿಕ
ವೇಷಧಾರಿಯಾಗಿ ಇಚ್ಲಂಪಾಡಿ, ಕೂಡ್ಲು, ಅಡೂರು, ಕೋರಕೋಡು,
ಮೂಲ್ಕಿ, ಧರ್ಮಸ್ಥಳ, ಪೊಳಲಿ, ಕದ್ರಿ, ಹಾಗೂ
ಕಟೀಲು ಮೇಳಗಳಲ್ಲಿ ಕಲಾವ್ಯವಸಾಯ ಮಾಡಿದವರು ಕದ್ರಿ ವಿಷ್ಣು. ರಕ್ತಬೀಜ,
ಋತುಪರ್ಣ, ಹಿರಣ್ಯಾಕ್ಷ, ಅರ್ಜುನ, ಇಂದ್ರಜಿತು, ಶಿಶುಪಾಲ,
ದೇವೇಂದ್ರ ಮೊದಲಾದ ಪಾತ್ರಗಳಲ್ಲಿ ಮತ್ತು
ಜೋಡಾಟದಲ್ಲಿ ಅಪ್ರತಿಮ ಕಲಾನೈಪುಣ್ಯ ಮೆರೆದ
ಕದ್ರಿ ವಿಷ್ಣು ಅವರ ಹೆಸರಿನಲ್ಲಿ
ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕದ್ರಿ ಪರಿಸರದ ಸಮಾನಾಸಕ್ತ ಯಕ್ಷ
ಪೋಷಕರ “ಕದ್ರಿ ಯಕ್ಷ ಬಳಗ”
ಈ ಪ್ರಶಸ್ತಿಯನ್ನು ಪ್ರತೀವರ್ಷ
ನೀಡುವ ಸಂಕಲ್ಪ ಹೊಂದಿದೆ.
ಮಾಡಾವು
ಕೊರಗಪ್ಪ ರೈಯವರು ಪಡ್ರೆ ಚಂದು
ಅವರ ಶಿಷ್ಯರಾಗಿದ್ದು ಕಳೆದ ಇಪ್ಪತ್ತೈದು ವರ್ಷಗಳಿಂದ
ಶ್ರೀ ಕಟೀಲು ಮೇಳದಲ್ಲಿ ಕಲಾವ್ಯವಸಾಯ
ಮಾಡುತ್ತಿದ್ದಾರೆ. ಕರ್ನಾಟಕ, ಬಪ್ಪನಾಡು, ಕದ್ರಿ ಹಾಗೂ ಕಾಂತಾವರ
ಮೇಳಗಳಲ್ಲಿಯೂ ತಿರುಗಾಟ ಮಾಡಿದ್ದಾರೆ. ಅಭಿಮನ್ಯು,
ಬಬ್ರುವಾಹನ, ಚಂಡಮುಂಡ, ಭಾರ್ಗವ ಮೊದಲಾದ ಪುಂಡುವೇಷಗಳ
ನಿರ್ವಹಣೆಯಲ್ಲಿ ಸಿದ್ಧಿ ಪ್ರಸಿದ್ಧಿ ಪಡೆದಿದ್ದಾರೆ.
ಅಂದು ರಾತ್ರಿ ಶ್ರೀ ಕಟೀಲು
ಮೇಳದವರಿಂದ “ಶ್ರೀ ವೀರಾಂಜನೇಯ”ಯಕ್ಷಗಾನ
ಸೇವೆ ಬಯಲಾಟ ಜರಗಲಿದೆ.