ಮಂಗಳೂರು: ಇತ್ತಿಚೇಗೆ ನಿಧನರಾದ ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದ, ಹೆಸರಾಂತ ಅರ್ಥಧಾರಿ ಸಿದ್ಧಕಟ್ಟೆ ದಿ.ವಿಶ್ವನಾಥ ಶೆಟ್ಟಿ ಅವರಿಗೆ
ಶೃದ್ದಾಂಜಲಿ ಕೋರುವ ಕಾರ್ಯಕ್ರಮವನ್ನು ವಾಮನಪದವಿನ ಸಿದ್ದಕಟ್ಟೆ ಅಭಿಮಾನಿ ಬಳಗ ನಡೆಸಿತು.
ಶನಿವಾರ ವಾಮನಪದವಿನ
ಗಣೇಶ ಮಂದಿರದಲ್ಲಿ ನಡೆದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ
ಕುಂಬ್ಲೆ ಸುಂದರ ರಾವ್ ಜ್ಯೋತಿ ಬೆಳಗಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ
ಪುನರೂರು ವಹಿಸಿದ್ದರು. ಯಕ್ಷಾಂಗನ ಮಂಗಳೂರು ಇದರ ಕಾರ್ಯಾಧ್ಯಕ್ಷರಾದ ಭಾಸ್ಕರ ರೈ ಕುಕ್ಕುವಳ್ಳಿ ಅವರು
ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತೋನ್ಸೆ ಪುಷ್ಕಳ ಕುಮಾರ್, ಜಿ.ಕೆ ಭಟ್ ಹಾಗೂ ಸಿದ್ದಕಟ್ಟೆ
ವಿಶ್ವನಾಥ ಶೆಟ್ಟಿ ಅಭಿಮಾನಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ತುಳು
ಭಾಷೆಯಲ್ಲಿ ಅನೇಕ ಪ್ರಸಂಗ
ರಚಿಸಿದ್ದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು “ಯಕ್ಷವಾಚಸ್ಪತಿ” ಎಂದೇ
ಪ್ರಖ್ಯಾತರಾಗಿದ್ದರು. ವಿಶ್ವನಾಥ ಶೆಟ್ಟಿ ಅವರು ಕೇವಲ ಪ್ರಸಂಗ ಕರ್ತರು ಮಾತ್ರವಲ್ಲದೇ ಅನೇಕ
ಮೇಳಗಳಲ್ಲಿ ಯಕ್ಷ ಕಲಾವಿದರಾಗಿ, ತಾಳ ಮದ್ದಳೆಗಳಲ್ಲೂ ಎಲ್ಲರ ಗಮನ ಸೆಳೆದಿದ್ದರು. ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟುವಿನಲ್ಲಿ ಕೊರಗ ಶೆಟ್ಟಿ ಮತ್ತು ರೇವತಿಯವರ ಪುತ್ರನಾಗಿ 1945ರಲ್ಲಿ ಜನಿಸಿದ ಇವರು ಪದವಿ ಪೂರ್ವ ಶಿಕ್ಷಣ ಪಡೆದಿದ್ದರು.