ಬಂಟ್ಸ್ ನ್ಯೂಸ್, ಮಂಗಳೂರು: ಕಡು ಬಡತನದಲ್ಲಿನರುವ ಅಶಕ್ತ ಯಕ್ಷಗಾನ ಕಲಾವಿದರಿಗೆ ಸಂಪೂರ್ಣ ಉಚಿತವಾಗಿ
ಮನೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್
‘ಪಟ್ಲ ಯಕ್ಷಾಶ್ರಯ-ಕಲಾಗ್ರಾಮ ಯೋಜನೆ’ಗೆ ಚಾಲನೆ ನೀಡಲಿದೆ.
ವೃತ್ತಿಪರ ಯಕ್ಷಗಾನ ಕಲಾವಿದರ ಯೋಗಕ್ಷೇಮದ ಚಿಂತನೆಯಲ್ಲಿ ಅಸ್ತಿತ್ವಕ್ಕೆ ಬಂದ "ಯಕ್ಷಧ್ರುವ ಪಟ್ಲ ಫೌಂಡೇಶನ್" ಈಗಾಗಲೆ ಈ ಕ್ಷತ್ರದ ಅಶಕ್ತರಿಗೆ ಆಸರೆಯಾಗಿ, ಕಲಾವಿದರ ಮಕ್ಕಳಲ್ಲಿ ಪ್ರತಿಬಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೆಳಕಾಗಿ , ಅನಾರೋಗ್ಯಪೀಡಿತರ ಬಾಳಿಗೆ ನೆರಳಾಗಿ ಅದೆಷ್ಟೋ ಮಹತ್ಕಾರ್ಯಗಳನ್ನು ಮಾಡಿ ಜನ ಮಾನಸದಲ್ಲಿ ಮೆಚ್ಚುಗೆಯನ್ನು ಪಡೆದು ತನ್ನ ಯೋಜಿತ ಸತ್ಕಾರ್ಯಗಳನ್ನು ಮುಂದುವರಿಸುತ್ತಿದೆ.
ಟ್ರಸ್ಟ್ ತನ್ನ ಸತ್ಕಾರ್ಯದ ಯೋಚನೆಯಲ್ಲಿ ಮುಂದುವರಿದು, ಉಭಯ ತಿಟ್ಟುಗಳಲ್ಲಿ ವೃತ್ತಿಪರ ಕಲಾವಿದರಾಗಿ ದುಡಿಯುತ್ತಿರುವ ನಿರಾಶ್ರಿತರ ಬಗೆಯಲ್ಲಿ ಚಿಂತಿಸಿ ಅವರ ಬಾಳಿಗೊಂದು ಮನೆಯನ್ನು ಸಂಪೂರ್ಣ ಉಚಿತವಾಗಿ ನಿರ್ಮಿಸಿಕೊಡುವ ತೀರ್ಮಾನವನ್ನು ಕೈಗೊಂಡಿದೆ. ಪಟ್ಲ
ಯಕ್ಷಾಶ್ರಯ-ಕಲಾಗ್ರಾಮ ಯೋಜನೆ’ಗೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ಐದು ಎಕ್ರೆ ಜಾಗವನ್ನು ಖರೀದಿಸಿ ಸುಮಾರು 100 ಮನೆಗಳನ್ನು ನಿರ್ಮಿಸಿ ಬಡ
ಕಲಾವಿದರ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯವಾಗಲಿದೆ.
ಅಗಸ್ಟ್ 15ರಂದು ಕಟೀಲಿನಲ್ಲಿ ಯೋಜನೆಗೆ ಚಾಲನೆ: ''ಪಟ್ಲ ಯಕ್ಷಾಶ್ರಯ - ಕಲಾಗ್ರಾಮ''ದ ಈ ಯೋಜನೆಗೆ, ಇದೇ ಬರುವ ಅಗಸ್ಟ್
15ರಂದು ಕಟೀಲು ಸರಸ್ವತಿ ಸದನದಲ್ಲಿ ''ಯಕ್ಷಧ್ರುವ ಪಟ್ಲ ಫೌಂಡೇಶನ್'' ಕಟೀಲು - ಎಕ್ಕಾರು ಘಟಕದ ಉದ್ಘಾಟನೆಯ ಸುಸಂದರ್ಭದಲ್ಲಿ ಚಾಲನೆಯನ್ನು ನೀಡುವುದಾಗಿ ತೀರ್ಮಾನಿಸಲಾಗಿದೆ. ಮಾಹಿತಿ ಕೃಪೆ: ಪಟ್ಲ ಅಭಿಮಾನಿ ಬಳಗ FB ಪೇಜ್