ಮಂಗಳೂರು: ದಕ್ಷಿಣ ಕನ್ನಡ ಕೇಟರಿಂಗ್ ಮಾಲೀಕರ ಸಂಘ(ರಿ)ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ಮಂಗಳೂರಿನಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ರಾಜಗೋಪಾಲ್ ರೈ ಆಯ್ಕೆಯಾಗಿದ್ದಾರೆ.
![](https://blogger.googleusercontent.com/img/b/R29vZ2xl/AVvXsEguD-Srw4C2mJoj7USHH0a9VL1I5iCZABDAjJj3lmbWFd8iY34HNh5aAa5cTx2qqyONz8w9CLBhBwPZO7URpIhls-3NjM_3AiHHy8vKEhVWBicQc8xZVIdbt5GwWav55GbRuA-R_C4tuwZNfER58Ftw38IGjgzkEoFrfpBIMYsAblvEHPWOpGYEajwP5Q/s16000/IMG_20220812_191131_copy_640x427.jpg)
![](https://blogger.googleusercontent.com/img/b/R29vZ2xl/AVvXsEiKoX5y5xwmE1vUaZxqFvRf_Y8aKYC-pKPTuEFYFy5iOdrtMNZAqngX5eXZG0gH5v-MJUFlTiNwJuShrgKniC_3sYl8td4-oLYhz6G7y2g5w7_5hiJ_NzmOGrMIoht54Pm5f_hfPHa0soKSd2YjO2JP0iy6xrDmT8AO2i66OOE9WvRL96S3TkYqbbDrcQ/s16000/IMG_20220812_191131_copy_640x427.jpg)
![](https://blogger.googleusercontent.com/img/b/R29vZ2xl/AVvXsEhkOlm5mDP6pgUdAvm6FwhxpXXwsNI3Og0luZfNDfqoLmBfaZU51H9OEp2OgYhSrrWOrmHZ1CT6cbAdAL2zFp5uvaF4pqL26-XL644MrW_NkLEVp0ZMhhDFQcHGkxtSFWDXvNz7OuRajnAM1b-ErhI-XNyUcVqF5W2TBRLBR-eIFhHLMe5uJ88i93lxQA/s16000/IMG_20220812_191210_copy_640x427.jpg)
ಸಂಘದ ಕಾರ್ಯದರ್ಶಿಯಾಗಿ ಜೋಸಿ ಸಿಕ್ವೆರಾ, ಕೋಶಾಧಿಕಾರಿಯಾಗಿ ರಾಜೇಶ್ ಶೆಟ್ಟಿ ಶಬರಿ ಅವರನ್ನು ಆರಿಸಲಾಗಿದೆ.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಕೇಟರಿಂಗ್ ಮಾಲೀಕರ ಸಂಘ ಕಳೆದ ಹಲವಾರು ವರ್ಷಗಳಿಂದ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಕೊರೋನಾ ಸಂದರ್ಭದಲ್ಲಿ ಬಡವರಿಗೆ ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ರಾಜಗೋಪಾಲರೈ ಅವರ ಅಧ್ಯಕ್ಷತೆಯಲ್ಲಿ ಸಂಘವು ಮುಂದೆಯೂ ಉತ್ತಮ ಕಾರ್ಯ ನಿರ್ವಹಣೆಯ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡಲಿ ಎಂದು ಆಶಿಸಿದರು.
ನೂತನ ಅಧ್ಯಕ್ಷ ರಾಜಗೋಪಾಲ ರೈ ಮಾತನಾಡಿ, ಹಲವು ವರ್ಷಗಳ ಹಿಂದೆ ಕೇಟರಿಂಗ್ ಮಾಲೀಕರು ಸಂಘಟನೆ ಇಲ್ಲದೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದರು. ಇದೀಗ ಜಿಲ್ಲೆಯ ಕೆಟರಿಂಗ್ ಮಾಲೀಕರನ್ನು ಒಟ್ಟು ಸೇರಿಸುವ ಮೂಲಕ ಸಂಘಟನೆಗೆ ಹೊಸ ಶಕ್ತಿಯನ್ನು ತುಂಬಲಾಗಿದೆ. ಇದರಿಂದ ಹಲವು ಸಮಾಜ ಸೇವಾ ಕಾರ್ಯಗಳು ಸಾಕಾರಗೊಂಡಿವೆ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಅವರು ಸಂಘದ ಎಲ್ಲಾ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದೆಯೂ ಅವರ ಸಹಕಾರವನ್ನು ಕೋರುವುದಾಗಿ ರಾಜಗೋಪಾಲ ರೈ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಕೇಟರಿಂಗ್ ಒಂದು ಸೇವೆಯೇ ಹೊರತು ಉದ್ಯಮವಲ್ಲ, ಅದನ್ನು ಇದೇ ಮಾದರಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಿರ್ಗಮಿತ ಅಧ್ಯಕ್ಷ ಸಂತೋಷ ಡಿಸೋಜ ಅವರು ನಿಯೋಜಿತ ಅಧ್ಯಕ್ಷ ರಾಜಗೋಪಾಲ ರೈ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು.
ಉದ್ಯಮಿ ಸದಾನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಸಂದೀಪ್ ಗರೋಡಿ, ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ ಕಾರಂತ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಸಂಘದ ಗೌರವಾಧ್ಯಕ್ಷ ಸುಧಾಕರ ಕಾಮತ್, ಉದ್ಯಮಿಗಳಾದ ಇಕ್ಬಾಲ್ ಗೋಲ್ಡ್ ಪ್ಯಾಲೇಸ್, ಅಬ್ದುಲ್ ಕರೀಂ ಮತ್ತಿತರರು ಇದ್ದರು.