ಬಂಟರ ಮಾತೃ ಸಂಘದ ಮಹಾಸಭೆಯಲ್ಲಿ ಅಜಿತ್ ಕುಮಾರ್ ರೈ
ಮಂಗಳೂರು: ರಾಜ್ಯದ ಮೀಸಲಾತಿಯಲ್ಲಿ ಬಂಟ ಸಮಾಜವು ಪ್ರವರ್ಗ 2ಎ ಯಲ್ಲಿ ಸೇರಿಸಲು ಅರ್ಹವಾಗಿದ್ದರೂ ಬಂಟ ಸಮಾಜವನ್ನು 3ಬಿ ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಅಗತ್ಯ ಇರುವ ಮಾಹಿತಿಯನ್ನು ಸಂಗ್ರಹಿಸಲು ಜನಗಣತಿಯನ್ನು ಭಾಂಧವ್ಯ ಹೆಸರಿನ ನಾಮಾಂಕಿತದೊಂದಿಗೆ ಆರಂಭಿಸಿರುತ್ತೇವೆ. ಅಲ್ಲದೆ ವಿಶ್ವ ವ್ಯಾಪಿಯಾಗಿ ನೆಲೆಸಿರುವ ಬಂಟ ಬಾಂಧವರ ಮಾಹಿತಿಯನ್ನು ಪಡೆದು ವಿಶ್ವಬಂಟರ ಮಾಹಿತಿ ಕೋಶವನ್ನು ಪಡೆದು ಸಮಾಜಕ್ಕೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.
![](https://blogger.googleusercontent.com/img/b/R29vZ2xl/AVvXsEgOCfvLx2Fga_pamQfWqmcOjj--lOQLU0luHMRW6aEr8QkcBcY5DrCAO0jCzQgLJfLKppvrFwMzB-fdGFICViuWZBMh20d0NLsrm1fyVqz7GaYJH5jLPPlqZdO4bnDeqaDQil3TR0lQQvzHMyKhvoMqgWwcQTJzWEkZ_NdgnW3xjQbzW8amDPRMFFEGPg/s16000/IMG_20220809_094853_copy_640x427.jpg)
![](https://blogger.googleusercontent.com/img/b/R29vZ2xl/AVvXsEhbGHAtYTntdwHsNC9RVulwq1-SmD_FlIZiUMCR03cWbFwcPU-cB2rIhLb44vTf3oUnTcXAwtyJdgIAg2_Rh0sUD1Ov89IoMUofKsO_0sFxRJWuI2p8MTuMBxu66dxBNAuJjLlSx0XuXR1d8iwqCTry_Vkatkv5l2icoiWh9ZNTOxeGAeOdPLe4aynwxw/s16000/IMG_20220809_094825_copy_640x446.jpg)
![](https://blogger.googleusercontent.com/img/b/R29vZ2xl/AVvXsEjJt5_-Z83CMvcCa6JnSDl_-YRtb_gXI4gXa3iiZcvympSwOX0U2VUkyw6X0nRyI0ZCoaIgRUOJwm8ztHBtrZwTwn6qLp3hZWgqDQtSAYLlFMzdNnz4shOPyn94C0I9FLlDpz3-7NuI34yHKWSudX75roRhJB9WVw130HFYen9rWIdBEWyvq4HE641f1Q/s16000/IMG_20220809_094707_copy_640x444.jpg)
![](https://blogger.googleusercontent.com/img/b/R29vZ2xl/AVvXsEjf3-ZOETckMLNI-zpxlXgvqo7YMCqbyNwwnX-Ps3LqVwLpmDHDvTIrAYo1x8PqFYsK0jiR9QD0GdifBDYokNI3N_EZizcROCqWvElbpB9o8K80a59pcaWrdHGTsVWSK-kF-qunmUT108GtmLB3uzFkEM0EngIsYpOMhKQ9m0QlrJkTjYr6u9ljPse9BQ/s16000/IMG_20220809_094731_copy_640x428.jpg)
ಬಂಟ ಸಮಾಜವನ್ನು ಹಿಂದುಳಿದ ವರ್ಗದಲ್ಲಿ ಸೇರಿಸಬೇಕೆಂದು ಸರಕಾರಕ್ಕೆ ಮನವರಿಕೆ ಮಾಡಿಕೊಡುವಂತೆ 1960ನೇ ಇಸವಿಯಲ್ಲೇ ಸಂಘದ ಮಹಾಸಭೆಯಲ್ಲಿ ನಿರ್ಣಯಿಸಲಾಗಿತ್ತು. ತದನಂತರದ ದಿನಗಳಲ್ಲಿ 18-10-2004ರಲ್ಲಿ ಮಂಗಳೂರಿನಲ್ಲಿ ನಡೆದ ಹಿಂದುಳಿದ ಆಯೋಗದ ಸಭೆಯಲ್ಲಿ ಅಧ್ಯಕ್ಷರು ಸ್ವತಹಃ ಮಂಡನೆ ಮಾಡಿ ಸಮಾಜವನ್ನು ಪ್ರವರ್ಗ 2ಎ ಯಲ್ಲಿ ಸೇರಿಸುವಂತೆ ಮನವಿ ಮಾಡಲಾಗಿತ್ತು. ಆಮೇಲೆ 1-10-2013, 17-10-2015 ಮತ್ತು 19-12-2022ರಲ್ಲೂ ಕೂಡಾ ಅಗತ್ಯ ಮಾಹಿತಿಗಳನ್ನು ಒದಗಿಸಿ ಮನವಿ ಮಾಡಲಾಗಿತ್ತು. ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸಮಾಜವನ್ನು ಪ್ರವರ್ಗ ಎ ಯಲ್ಲಿ ಸೇರಿಸಲು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಶತಮಾನೋತ್ಸವ ಕಟ್ಟಡ ನಿರ್ಮಾಣ: ಬಂಟ್ಸ್ ಹಾಸ್ಟೇಲ್ ನಲ್ಲಿ ಬಂಟರ ಮಾತೃ ಸಂಘದ ಶತಮಾನೋತ್ಸವ ಕಟ್ಟಡದ ನಿರ್ಮಾಣಕ್ಕಾಗಿ ಅಗತ್ಯ ಇರುವ ಎಲ್ಲಾ ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ಪಡೆಯಲಾಗಿದೆ. ಇನ್ನು ಮಹಾನಗರ ಪಾಲಿಕೆಗೆ ನಿರ್ಮಾಣದ ಶುಲ್ಕವನ್ನು ಪಾವತಿಸಿ ಶೀಘ್ರದಲ್ಲೇ ನಿರ್ಮಾಣದ ಕೆಲಸ ಪ್ರಾರಂಭವಾಗಲಿದೆ. ಕಟ್ಟಡ ನಿರ್ಮಾಣದ ಬಳಿಕ ಬರುವ ಬಹುದೊಡ್ಡ ಮೊತ್ತದ ಆದಾಯವನ್ನು ಸಮಾಜದ ಶ್ರೇಯೋಭಿವೃದ್ದಿಗಾಗಿ ವಿನಿಯೋಗಿಸಲಾಗುವುದು ಎಂದರು.
ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ, ಮಹಿಳಾ ಸೌಹಾರ್ದ ಸಹಕಾರಿ ಸಂಘ: ಈ ವರ್ಷ ಜರಗಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ಸಂದರ್ಭದಲ್ಲಿ ಮಹಿಳೆಯರ ಸಶಕ್ತೀಕರಣಕ್ಕಾಗಿ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಆರಂಭಿಸುವ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಹಾಗೂ ಮಹಿಳೆಯರ ಸಶಕ್ತೀಕರಣಕ್ಕಾಗಿ ಶಕ್ತಿನಗರದಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಜಾಗದಲ್ಲಿ ಕೈಗಾರಿಕೋದ್ಯಮವನ್ನು ಸ್ಥಾಪಿಸಲಾಗುವುದು ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ವರದಿ ಮಂಡಿಸಿದರು. ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ ಲೆಕ್ಕಪತ್ರ ಮಂಡಿಸಿದರು.
ಪ್ರತಿಯೊಂದು ತಾಲೂಕು ಮಟ್ಟದ ವರದಿಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸಂಚಾಲಕಿ ಶಾಲಿನಿ ಶೆಟ್ಟಿ, ಶ್ರೀ ರಾಮಕೃಷ್ಣ ವಿದ್ಯಾರ್ಥಿಭವನದ ವರದಿಯನ್ನು ಸಂಚಾಲಕ ಉಮೇಶ್ ರೈ ಪದವು ಮೇಗಿನಮನೆ, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ವರದಿಯನ್ನು ಸಂಚಾಲಕ ಡಾ. ಸಂಜೀವ ರೈ, ಪುತ್ತೂರು ಶ್ರೀ ರಾಮಕೃಷ್ಣ ಹೈಸ್ಕೂಲ್ ನ ವರದಿಯನ್ನು ಸಂಚಾಲಕ ಎ. ಹೇಮನಾಥ ಶೆಟ್ಟಿ ಕಾವು, ಕಾರ್ಕಳ ವಿದ್ಯಾರ್ಥಿ ಭವನದ ವರದಿಯನ್ನು ಸಂಚಾಲಕ ಚೇತನ್ ಶೆಟ್ಟಿ, ಕಾರ್ಕಳ ತಾಲೂಕು ಸಮಿತಿಯ ವರದಿಯನ್ನು ಸಂಚಾಲಕ ಮಣಿರಾಜ್ ಶೆಟ್ಟಿ, ಮಂಗಳೂರು ತಾಲೂಕು ಸಮಿತಿಯ ವರದಿಯನ್ನು ಸಂಚಾಲಕ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಕುಂದಾಪುರ ತಾಲೂಕು ಸಮಿತಿಯ ವರದಿಯನ್ನು ಸುಧಾಕರ ಶೆಟ್ಟಿ ಆವರ್ಸೆ, ಉಡುಪಿ ತಾಲೂಕಿನ ವರದಿಯನ್ನು ಜಯರಾಜ ಹೆಗ್ಡೆ, ಬಂಟ್ವಾಳ ತಾಲೂಕಿನ ವರದಿಯನ್ನು ರಾಮಣ್ಣ ರೈ, ಪುತ್ತೂರು ತಾಲೂಕಿನ ವರದಿಯನ್ನು ದಯಾನಂದ ರೈ ಮನವಳಿಕೆಗುತ್ತು, ಬೆಳ್ತಂಗಡಿ ತಾಲೂಕಿನ ವರದಿಯನ್ನು ರಘುರಾಮ ಶೆಟ್ಟಿ ಮಂಡಿಸಿದರು. ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು.
ಉಪಾಧ್ಯಕ್ಷ ಎ. ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ವಂದಿಸಿದರು. ಸುಖೇಶ್ ಚೌಟ ಉಳ್ಳಾಲ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.