ಪುನೀತ್ ರಾಜ್ ಅಪರೂಪದ ವ್ಯಕ್ತಿತ್ವದ ವ್ಯಕ್ತಿ : ಕೆ. ಪ್ರಕಾಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪುನೀತ್ ರಾಜ್ ಅಪರೂಪದ ವ್ಯಕ್ತಿತ್ವದ ವ್ಯಕ್ತಿ : ಕೆ. ಪ್ರಕಾಶ್ ಶೆಟ್ಟಿ

Share This

ಸುರತ್ಕಲ್‌ನಲ್ಲಿ ಗುರುಕಿರಣ್‌ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭ

ಸುರತ್ಕಲ್: ರಂಗಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮದಲ್ಲಿ ರಂಗಚಾವಡಿ ಪ್ರಶಸ್ತಿ 2021 ಪ್ರದಾನ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. 
ಕಾರ್ಯಕ್ರಮವನ್ನು ಎಂ.ಆರ್.ಜಿ. ಗ್ರೂಪ್ ಇದರ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ವೇಳೆ ಮಾತಾಡಿದ ಎಂ.ಆರ್.ಜಿ. ಗ್ರೂಪ್ ಸ್ಥಾಪಕ ಪ್ರಕಾಶ್ ಶೆಟ್ಟಿ ಅವರು, ರಂಗಚಾವಡಿ ಸಂಘಟನೆ ಕಳೆದ 22 ವರ್ಷಗಳಿಂದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಚಾವಡಿಗೆ ಕರೆದುಕೊಂಡು ಬಂದು ಗೌರವಿಸುತ್ತಿರುವುದು ಶ್ಲಾಘನೀಯ. ಇಂದು ಸನ್ಮಾನ ಸ್ವೀಕರಿಸುತ್ತಿರುವ ಗುರುಕಿರಣ್ ಅವರು ತುಳುನಾಡಿನಿಂದ ಹೊರಟು ದೇಶ ವಿದೇಶಗಳ ತನಕ ಸಂಗೀತದ ಕಂಪು ಪಸರಿಸಿದ್ದಾರೆ. ಅವರನ್ನು ಗೌರವಿಸಿದ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾವಿದರನ್ನು ಸನ್ಮಾನಿಸಿ ಅವರಲ್ಲಿ ಸಾಧಿಸುವ ಛಲ ಹೆಚ್ಚಿಸಲಿ ಎಂದರು.

ಇತ್ತೀಚಿಗೆ ವಿಧಿವಶರಾದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಕಾರ್ಯಕ್ರಮದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಪುನೀತ್ ಅಪರೂಪದಲ್ಲಿ ಅಪರೂಪದ ವ್ಯಕ್ತಿಯಾಗಿದ್ದು ಅವರ ಒಡನಾಟ ಆತ್ಮೀಯತೆ ಮರೆಯಲಾರದ್ದು ಎಂದು ಪ್ರಕಾಶ್ ಶೆಟ್ಟಿ ನೆನಪುಗಳನ್ನು ಮೆಲುಕು ಹಾಕಿದರು.

ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ರಂಗಚಾವಡಿ ಪ್ರಶಸ್ತಿ-2021 ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಗುರುಕಿರಣ್ ಅವರು, ಬೇರೆಲ್ಲ ಗೌರವ ಸನ್ಮಾನಕ್ಕಿಂತ ನಮ್ಮ ಊರಲ್ಲಿ, ಊರ ಜನರು ಮಾಡುವ ಸನ್ಮಾನ ಖುಷಿ ಕೊಡುವಂತದ್ದು. ರಂಗಚಾವಡಿ ಜೊತೆಗೆ ಬೆಳೆದಿರುವ ನನಗೆ ಈ ಸನ್ಮಾನ ಸದಾಕಾಲ ನೆನಪಲ್ಲಿ ಉಳಿಯುವಂತದ್ದು" ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರನಟರಿಗೆ ಬೇರೆ ಜಿಲ್ಲೆಗಳಲ್ಲಿ ಇರುವಂತಹ ಅಭಿಮಾನಿಗಳು ಕಂಡುಬರುವುದು ಅಪರೂಪ. ಆದರೆ ಮೊದಲ ಬಾರಿ ಪುನೀತ್ ರಾಜ್ ಕುಮಾರ್ ಅವರ ಮೇಲೆ ಇಂತಹ ಪ್ರೀತಿಯನ್ನು ಇಲ್ಲಿ ಕಾಣುತ್ತಿದ್ದೇನೆ. ಅದು ಒಬ್ಬ ನಟನಿಗಿಂತ ಜಾಸ್ತಿ ಒಬ್ಬ ಆದರ್ಶ ವ್ಯಕ್ತಿತ್ವಕ್ಕೆ ಸಿಕ್ಕ ಗೌರವ" ಎಂದರು.

ಬಳಿಕ ಮಾತಾಡಿದ ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ಅವರು, ಮಂಗಳೂರಿಗೆ ಬಂದು ನಾನು ಒಂದು ವರ್ಷ ಪೂರ್ತಿ ಆಗುತ್ತಿದೆ. ಇಲ್ಲಿಗೆ ಬರುವ ಮೊದಲು ಇಲ್ಲಿನ ಜನ ಪೊಲೀಸ್ ಇಲಾಖೆಗೆ ಸಹಕಾರ ನೀಡುವುದಿಲ್ಲ ಎಂದು ಕೇಳಿ ತಿಳಿದುಕೊಂಡಿದ್ದೆ. ಆದರೆ ಇಲ್ಲಿ ಬಂದ ಬಳಿಕ ಇಲ್ಲಿನ ಜನರ ಪ್ರೀತಿ, ಬೇರೆ ಜಿಲ್ಲೆಗಳ ಜನರಿಗಿಂತ ಹೆಚ್ಚಿನ ಸಹಕಾರ ಕಂಡು ಖುಷಿಯಾಗಿದೆ ಎಂದರು.

ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ ಕಲಾವಿದರನ್ನು ಗುರುತಿಸಿ ಗೌರವಿಸುವ ರಂಗಚಾವಡಿಯ ಕೆಲಸ ಕಾರ್ಯ ಶ್ಲಾಘನೀಯ. ಇದು ನಿರಂತರ ನಡೆಯಲಿ ಎಂದರು. ಮರೆಯಾದ ಮಾಣಿಕ್ಯ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಕಾರ್ಯಕ್ರಮ ಜರುಗಿತು. ಮಲೆನಾಡ ಕೋಗಿಲೆ ಖ್ಯಾತಿಯ ಗಿರೀಶ್ ಸಾಗರ ಮತ್ತು ಬಳಗ ಕಾರ್ಯಕ್ರಮ ನಡೆಸಿಕೊಟ್ಟಿತು.

ವೇದಿಕೆಯಲ್ಲಿ ಜಾಗತಿಕ ಬಂಟ ಪ್ರತಿಷ್ಠಾನ ಇದರ ಪ್ರಧಾನ ಕಾರ್ಯದರ್ಶಿ ಸಿ.ಎ. ಸುಧೀರ್ ಕುಮಾರ್ ಶೆಟ್ಟಿ, ದಿವ್ಯರೂಪ ಕನ್ ಸ್ಟ್ರಕ್ಷನ್ಸ್ ಮಾಲಕ ಯಾದವ ಕೋಟ್ಯಾನ್ ಪೆರ್ಮುದೆ, ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ರವಿ ಶೆಟ್ಟಿ ಕಳಸ, ಉದ್ಯಮಿ ರಮಾನಾಥ್ ಶೆಟ್ಟಿ ಬೈಕಂಪಾಡಿ, ಲಕುಮಿ ತಂಡದ ಸಂಚಾಲಕ ಕಿಶೋರ್ ಡಿ. ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ, ‘ಕ್ಯಾಟ್ಕ’ ಅಧ್ಯಕ್ಷ ಮೋಹನ್ ಕೊಪ್ಪಲ, ಹಿರಿಯ ರಂಗಕರ್ಮಿ ವಿ.ಜಿ. ಪಾಲ್, ಚಿತ್ರನಟ ರೂಪೇಶ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಬೋಜರಾಜ್ ವಾಮಂಜೂರು, ನಿರೀಕ್ಷಾ ಶೆಟ್ಟಿ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಅಭಿನಂದನಾ ಶುಭನುಡಿ ನುಡಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಶಿಫಾಲಿ ಅವರಿಂದ ನೃತ್ಯ ಕಾರ್ಯಕ್ರಮ ಜರಗಿತು.

Pages