ಮಂಗಳೂರು: ಇತ್ತಿಚೇಗೆ ಬಿಡುಗಡೆಯಾಗಿ ಬಹಳಷ್ಟು ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ‘ದಿಯಾ’ ಕನ್ನಡ ಸಿನಿಮಾ ಕೂಡ ಒಂದಾಗಿದ್ದು ಸಿನಿ ರಸಿಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ದಿಯಾ ಸಿನಿಮಾ ಹೆಸರೇ ಹೇಳುವಂತೆ ನಾಯಕಿ ದಿಯಾಳ ಬದುಕಿನಲ್ಲಿ ನಡೆದ ಅನೇಕ ಭಾವನಾತ್ಮಕ ತಿರುವಿನ ಕತೆ. ನಾಯಕಿಯಾಗಿ ಖುಷಿ, ನಾಯಕರಾಗಿ ದೀಕ್ಷಿತ್ ಶೆಟ್ಟಿ, ಪೃಥ್ವಿ ಅಂಬರ್ ಹಾಗೂ ಪವಿತ್ರಾ ಲೋಕೇಶ್ ತಾಯಿ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಾಣುವ ಹಾಡು, ಫೈಟಿಂಗ್’ಗಳನ್ನು ಈ ಸಿನಿಮಾದಲ್ಲಿ ನೀವು ಕಾಣಲಾರಿರಿ.
ದಿಯಾ ಇಷ್ಟ ಪಟ್ಟ ಹುಡುಗ ರೋಹಿತ್ ಆಕೆ ಪ್ರೀತಿ ನಿವೇದನೆ ಮಾಡೋ ಮುಂಚೆನೇ ವಿದೇಶದಲ್ಲಿ ಉತ್ತಮ ಕೆಲಸದ ನಿಮಿತ್ತ ಕಾಲೇಜು ಬೀಡುತ್ತಾನೆ. ಮುಂದೆ ಮುಂಬೈನಲ್ಲಿ ಆಕಸ್ಮಿಕವಾಗಿ ಭೇಟಿಯಾಗುವ ರೋಹಿತ್ ಕಾಲೇಜು ದಿನಗಳಲ್ಲಿ ತಾನೂ ದಿಯಾಳನ್ನು ಇಷ್ಟಪಡುತ್ತಿದ್ದ ಬಗ್ಗೆ ತಿಳಿಸುತ್ತಾನೆ. ಮುಂದೆ ಅಪಘಾತದಲ್ಲಿ ಇಬ್ಬರೂ ಆಸ್ಪತ್ರೆ ಸೇರುತ್ತಾರೆ. ಅಪಘಾತದಿಂದ ರೋಹಿತ್ ಕೋಮಾಕ್ಕೆ ಹೋಗಿರೊದರಿಂದ ಆತ ಸಾವನ್ನಪ್ಪಿರುವುದಾಗಿ ಮನೆಯವರು ದಿಯಾಳಿಗೆ ತಿಳಿಸುತ್ತಾರೆ. ಪ್ರಿಯಕರನ ಸಾವಿನ ನೋವು ಕಳೆಯಲು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳುತ್ತಾಳೆ.
ಬೆಂಗಳೂರಿಗೆ ಬಂದ ದಿಯಾ ರೋಹಿತ್ ಸಾವಿನ ನೋವನ್ನು ಮರೆಯಲಾರದೆ ಆತ್ಮಹತ್ಯೆಗೆ ಸಿದ್ದವಾಗುವ ಸಂದರ್ಭ ಮತ್ತೋರ್ವ ನಾಯಕ ಆದಿಯಾಗಿ ಪೃಥ್ವಿ ಅಂಬರ್ ಕಾಣಿಸಿಕೊಳ್ಳುತ್ತಾರೆ. ದಿಯಾಳಿಗೆ ಜೀವನೋತ್ಸಾಹವನ್ನು ತುಂಬುವ ಆದಿ ಆಕೆಯ ಮನಸ್ಸನ್ನು ಗೆಲ್ಲುವಲ್ಲಿ ಯಶ್ವಸಿಯಾಗುತ್ತಾನೆ. ಆದರೆ ಮುಂಬೈ ಮರಳುವ ದಿಯಾಳಿಗೆ ಕೋಮಾದಿಂದ ಹೊರಬಂದಿರುವ ರೋಹಿತ್ ಮತ್ತೊಮ್ಮೆ ಶಾಕ್ ನೀಡುತ್ತಾನೆ. ಎಲ್ಲಾ ವಿಚಾರ ತಿಳಿಸಿದ ಮನೆಯವರು ದಿಯಾಳಿಗೆ ರೋಹಿತ್’ನೊಂದಿಗೆ ಮದುವೆ ಮಾಡಲು ಮುಂದಾಗುತ್ತಾರೆ.
ರೋಹಿತ್ - ಆದಿ ಪ್ರೀತಿಯಲ್ಲಿ ಯಾರನ್ನು ಆಯ್ಕೆ ಮಾಡಬೇಕೆನ್ನುವ ದಿಯಾ ಗೊಂದಲ, ಆದಿ ತಾಯಿಯ ಮಮತೆ ವಾತ್ಸಲ್ಯದ ಭಾವನಾತ್ಮಾಕ ದೃಶ್ಯಗಳು ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ. ಜತೆಗೆ ಕರಾವಳಿಯ ಪ್ರಕೃತಿಯ ಸೊಬಗನ್ನು ಸಿನಿಮಾದಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ನಿರ್ದೇಶಕ ಕೆ. ಎಸ್. ಅಶೋಕ್ ಅವರು ದಿಯಾಳನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ.