ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆ
ಹಮ್ಮಿಕೊಂಡಿದ್ದ ಎರಡು ದಿನದ ‘ಶಕ್ತಿ
ಫೆಸ್ಟ್’ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಪದ್ಮಶ್ರೀ
ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಶಕ್ತಿ ವಸತಿ ಶಾಲೆಯು ಸನ್ಮಾನಿಸಿ ಗೌರವಿಸಿತು.
ನಂತರ ಸಭೆಯನ್ನುದ್ದೇಶಿಸಿ
ಮಾತನಾಡಿದ ಹಾಜಬ್ಬರು, ತಾನು
ಯಾವುದೇ ಪ್ರಶಸ್ತಿ, ಪುರಸ್ಕಾರಗಳ ಬೆನ್ನತ್ತಿ ಹೋದವನಲ್ಲ. ಚಿಕ್ಕಂದಿನಿಂದಲೇ ಶಿಕ್ಷಣದಿಂದ ವಂಚಿತನಾದ ತಾನು ತನ್ನ ಊರಿನ
ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು
ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದೆ. ಕಿತ್ತಳೆ ಮಾರಿ ಬಂದ
ಹಣದಿಂದ ಶಾಲೆಯನ್ನು ತೆರೆದು, ಕೃತಾರ್ಥನಾಗಿದ್ದೇನೆ. ರಾಷ್ಟ್ರದ
ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಬರುವ
ಕನಸ್ಸನ್ನು ನಾನು ಎಂದೂ ಕಂಡವನಲ್ಲ.
ಊರ-ಪರವೂರ ಜನರ ಸಹಕಾರದಿಂದ
ಇದು ಸಾಧ್ಯವಾಗಿದೆ ಎಂದು ವಿನಮ್ರವಾಗಿ ನುಡಿದರು.
‘ಶಕ್ತಿ ಫೆಸ್ಟ್’
ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ
ಭರತನಾಟ್ಯ ಕಲಾವಿದೆ ವಾಣಿ ರಾಜಗೋಪಾಲ್,
ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಲಲಿತ
ಕಲೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರೆ ಮಾನಸಿಕ ನೆಮ್ಮದಿ ತಮ್ಮದಾಗುವುದು,
ಜೀವನ ಎಂದರೆ ವೃತ್ತಿ ಮತ್ತು
ಹಣ ಮಾತ್ರವಲ್ಲ ನಮ್ಮ ನಮ್ಮ ಆಸಕ್ತಿಗನುಗುಣವಾಗಿ
ಉತ್ತಮ ಹವ್ಯಾಸಗಳನ್ನು, ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿ ಮಾತನಾಡಿದ ಶ್ರೀ ಗೋಪಾಲಕೃಷ್ಣ
ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ
ಕೆ.ಸಿ ನಾೈಕ್, ಓರ್ವ
ಜನ ಸಾಮಾನ್ಯ ವ್ಯಕ್ತಿ ತನ್ನ
ತ್ಯಾಗ ಹಾಗೂ ಸೇವಾ ಮನೋಭಾವನೆಯಿಂದ
ಉನ್ನತ ಮಟ್ಟಕ್ಕೆ ಹೇಗೆ ಏರಬಹುದು ಎಂಬುದಕ್ಕೆ
ಹರೇಕಳ ಹಾಜಬ್ಬ ಅತ್ಯುತ್ತಮ ಉದಾಹರಣೆ
ಅಭಿಪ್ರಾಯ ವ್ಯಕ್ತಪಡಿಸಿದರು.
ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ
ಬೈಕಾಡಿ ಜನಾರ್ದನ ಆಚಾರ್ ಅಭಿನಂದನ
ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಮೊತ್ತಮೊದಲು
ಹಾಜಬ್ಬನವರನ್ನು ಗುರುತಿಸಿ ಅವರ ಶಿಕ್ಷಣ ಸೇವಾ
ಕೈಂಕರ್ಯಗಳ ಬಗ್ಗೆ ಓದುಗರಿಗೆ ಪರಿಚಯಿಸಿದ
ಹೊಸ ದಿಗಂತ ಪತ್ರಿಕೆಯ ಗುರವಪ್ಪ
ಬಾಳೆಪುಣಿಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ಕುಲಶೇಖರ ಸೇಕ್ರೆಡ್
ಹಾರ್ಟ್ ಹೈಸ್ಕೂಲಿನ ಮುಖ್ಯ ಶಿಕ್ಷಕಿ ಸಿಸ್ಟರ್
ಮರಿಯಾ ಎಸ್.ಎಲ್. ಡಿಸೋಜಾ
ಭಾಗವಹಿಸಿದ್ದರು. ಶಕ್ತಿ ಎಜ್ಯುಕೇಶನ್
ಟ್ರಸ್ಟಿನ ಪ್ರಧಾನ ಸಲಹೆಗಾರ ರಮೇಶ
ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ
ಪ್ರಖ್ಯಾತ್ ರೈ, ಶಕ್ತಿ ಪಿ.ಯು ಕಾಲೇಜಿನ ಪ್ರಾಚಾರ್ಯ
ಪ್ರಭಾಕರ ಜಿ.ಎಸ್, ಶ್ರೀ
ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ
ಮುಖ್ಯ ಶಿಕ್ಷಕಿ ನೀಮಾ ಸಕ್ಸೇನಾ
ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ವಿದ್ಯಾ
ಕಾಮತ್ ಆರಂಭದಲ್ಲಿ ಸ್ವಾಗತಿಸಿರು. ಶಿಕ್ಷಕಿ ರೇಖಾ ವಂದಿಸಿದರು.
ಸ್ವಾತಿ ಭರತ್ ಕಾರ್ಯಕ್ರಮ ನಿರೂಪಿಸಿದರು.