ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ದುರ್ಗಾ
ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ವಿಜಯದಶಮಿಯ
ಪರ್ವಕಾಲದಲ್ಲಿ ಸಂಜೆ ಆರಾಧನಾ ರಂಗ
ಪೂಜಾ ಮಹೋತ್ಸವ ಸಹಿತ ಬಲಿ
ಉತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ಶ್ರೀ
ರಮಾನಂದ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ
ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.
ಹತ್ತು ದಿನಗಳ ಕಾಲ ನಿರಂತರವಾಗಿ
ನೆರವೇರಿದ ಧಾರ್ಮಿಕ ಕಾರ್ಯಕ್ರಮಗಳ
ಮಂಗಲೋತ್ಸವ ವಾಗಿ ಮಹಾರಂಗ ಪೂಜಾಮಹೋತ್ಸವ
ಭಕ್ತರ ಸಮಕ್ಷಮದಲ್ಲಿ ದೀಪಾರಾಧನೆ ಸಹಿತವಾಗಿ ವಸಂತ ಪೂಜೆ ಹಾಗೂ
ತೊಟ್ಟಿಲು ಉತ್ಸವದೊಂದಿಗೆ ಸಂಪನ್ನಗೊಂಡಿತು.
ಪಳ್ಳಿ ಗುರುರಾಜ್ ಭಟ್ ಅವರಿಂದ ಬಲಿ
ಉತ್ಸವ ನೆರವೇರಿತು. ವಿಶೇಷವಾದ ನೃತ್ಯ ಸುತ್ತು ಕ್ಷೇತ್ರದ
ಸ್ವಾತಿ ಆಚಾರ್ಯ ಅವರಿಂದ ಸಮರ್ಪಿಸಲ್ಪಟಿತು. ಸಾಂಸ್ಕೃತಿಕ
ಕಾರ್ಯಕ್ರಮವಾಗಿ ಹಿರಿಯಡಕದ ಚಂದ್ರಶೇಖರ್ ದೇವಾಡಿಗ ಮತ್ತು ಬಳಗದವರಿಂದ
ಸ್ಯಾಕ್ಸೋಫೋನ್ ವಾದನ ಕ್ಷೇತ್ರದ ನವಶಕ್ತಿ
ವೇದಿಕೆಯಲ್ಲಿ ನೆರವೇರಿತು. ರಾತ್ರಿ ಮಹಾ ಅನ್ನ ಸಂತರ್ಪಣೆ
ನೆರವೇರಿತು.
ರಂಗ ಪೂಜಾ ಮಹೋತ್ಸವದ ಸಂದರ್ಭದಲ್ಲಿ ತಂತ್ರಿವರ್ಯರು
ಉಲಿಯುವ ದೇವಿಯ ಧ್ಯಾನವನ್ನು ಆಲಿಸಲು
ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ನೆರೆದಿದ್ದು,
ಹತ್ತು ದಿನಗಳ ಕಾಲ ಕ್ಷೇತ್ರದಲ್ಲಿ
ವೈಭವೋಪೇತವಾಗಿ ಸಂಪನ್ನಗೊಂಡ ಶರನ್ನವರಾತ್ರಿ ಮಹೋತ್ಸವಕ್ಕೆ ವೈಭವದ ತೆರೆ ಬಿದ್ದಂತಾಗಿದೆ
ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ
ನಾಗರಾಜ್ ತಿಳಿಸಿರುತ್ತಾರೆ.